ನವದೆಹಲಿ (ಪಿಟಿಐ) : ರೈಲ್ವೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತ್ತು ಹೊಸ ಪಿಂಚಣಿ ಪದ್ಧತಿಯನ್ನು ವಿರೋಧಿಸಿ ನಾಳೆ ದೇಶವ್ಯಾಪಿ ಉಪವಾಸ ಸತ್ಯಾಗ್ರಹ ನಡೆಸಲು ರೈಲ್ವೆ ನೌಕರರ ವಿವಿಧ ಸಂಘಗಳ ಒಕ್ಕೂಟಗಳು ಸೋಮವಾರ ಇಲ್ಲಿ ನಿರ್ಧರಿಸಿವೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಳಿ ನಿಯಂತ್ರಕರೂ ಸೇರಿದಂತೆ ಲಕ್ಷಕ್ಕೂ ಅಧಿಕ ರೈಲ್ವೆ ನೌಕರರು, ಕಾರ್ಯನಿರತ ಸಿಬ್ಬಂದಿಗಳು, ಮತ್ತು ತಾಂತ್ರಿಕ ವರ್ಗ ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ಭಾರತೀಯ ರೈಲ್ವೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ತಿಳಿಸಿದರು.
ರೈಲ್ವೆ ನೌಕರರ ಬೇಡಿಕೆಗಳ ಕುರಿತು ಜಂಟಿ ಸಮಿತಿಯ ಶಿಫಾರಸುಗಳನ್ನು ರೈಲ್ವೆ ಸಚಿವಾಲಯ ಜಾರಿಗೆ ತಂದಿಲ್ಲ. ಇದು ರೈಲ್ವೆ ನೌಕರರ ಅಸಮಧಾನಕ್ಕೆ ಕಾರಣವಾಗಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಹಲವು ಬಾರಿ ಒತ್ತಾಯಿಸಿದ್ದೇವೆಯಾದರೂ ಪ್ರಯೋಜನವಾಗಿಲ್ಲ. ಇದು ಹೀಗೇ ಮುಂದುವರಿದರೆ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ಮಿಶ್ರಾ ಎಚ್ಚರಿಕೆ ನೀಡಿದರು.