ಕುರುಗೋಡು: ಕೇಂದ್ರೀಯ ಕಾರ್ಮಿಕ ಸಂಘಟನೆ ಕರೆಯ ಮೇರೆಗೆ ಸಿಐಟಿಯು ನೇತೃತ್ವದ ಕಾರ್ಮಿಕ ಸಂಘಟನೆ ಕಾರ್ಯ ಕರ್ತರು ಜಂಟಿಯಾಗಿ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಬುಧವಾರ ರಸ್ತೆ ತಡೆ ನಡೆಸಿದ ಕಾರಣ ಪೊಲೀಸರು ಬಂಧಿಸಿ ಬಿಡುಗಡೆಮಾಡಿದರು.
ಪ್ರಾರಂಭದಲ್ಲಿ ಸಿಐಟಿಯು ಕಚೇರಿಯಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮುಖ್ಯ ವೃತ್ತದಲ್ಲಿ ಸಮಾವೇಶಗೊಂಡು ಬಹಿರಂಗ ಸಭೆ ನಡೆಸಿದರು. ಸಭೆಯಲ್ಲಿ ಕಾರ್ಮಿಕ ಮುಖಂಡ ಎಚ್.ಎಂ. ವಿಶ್ವನಾಥಸ್ವಾಮಿ, ಕೃಷಿ ಕಾರ್ಮಿಕ ಮುಖಂಡ ಎಸ್ಪಿ. ಮಹ್ಮದ್ ಖಾನ್ ಮತ್ತು ಪ್ರಾಂತ ರೈತ ಸಂಘದ ಅಧ್ಯಕ್ಷ ಕೆ.ಗಾದಿಲಿಂಗಪ್ಪ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಬೇಡಿಕೆ: ಇಲ್ಲಿಯವರೆಗೆ ಸರಕಾರ ಮತ್ತು ಸರಕಾರೇತರ ಸಂಸ್ಥೆ ನೇಮಕ ಮಾಡಿದ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಿ, ಖಾಯಂ ಕಾರ್ಮಿಕರ ವೇತನ ಮತ್ತು ಸೌಲಭ್ಯ ನೀಡಬೇಕು. ತಿಂಗಳಿಗೆ ಬೆಲೆ ಸೂಚ್ಯಾಂಕ ಅಧಾರಿತ ಶಾಸನ ಬದ್ಧ ಕೂಲಿ 10 ಸಾವಿರ ರೂಪಾಯಿ ನೀಡಬೇಕು. ಕನಿಷ್ಠ ಕೂಲಿ ಕಾಯ್ದೆಯನ್ನು ಶಾಸನ ಬದ್ಧಗೊಳಿಸ ಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಂಗನವಾಡಿ ಕಾರ್ಮಿಕ ಸಂಘ, ಕೃಷಿ ಕೂಲಿಕಾರರ ಸಂಘ, ಹಮಾಲಿ ಕಾರ್ಮಿಕ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಅನ್ನ ಪೂರ್ಣ, ವೇದಾಚಲಂ, ಲಲಿತಮ್ಮ, ಮಾರೆಣ್ಣ, ಸೋಮಪ್ಪ ಹಾಜರಿದ್ದರು.