ಚನ್ನರಾಯಪಟ್ಟಣ: ತಾಲ್ಲೂಕಿನ ಬೇಡಿಗನಹಳ್ಳಿಯ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬೆಟ್ಟ ನೂರಾರು ವರ್ಷಗಳ ಹಿಂದೆ ಭೂಮಿಗೆ ಬಿದ್ದ `ಉಲ್ಕಾಶಿಲೆ~ ಎನ್ನುವ ಸುದ್ದಿ ಬಿತ್ತರವಾದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ನೂರಾರು ಜನರು ಬೆಟ್ಟದ ಸುತ್ತ ಗುರುವಾರ ಜಮಾಯಿಸಿದರು.
ಈವರೆಗೆ ಗ್ರಾಮಸ್ಥರು ಈ ಬೆಟ್ಟವನ್ನು `ಒಡ್ಡಗಲ್ಲು ಬೆಟ್ಟ~ (ಓರೆಕಲ್ಲು ಬೆಟ್ಟ) ಎಂದು ಕರೆಯುತ್ತಿದ್ದರು. ಗುರುವಾರ ಮುಂಜಾನೆವರೆಗೂ ಜನರಿಗೆ ಇದು ಸಾಮಾನ್ಯ ಬೆಟ್ಟವಾಗಿತ್ತು. ಬೆಟ್ಟದ ಒಂದು ಬದಿಯಲ್ಲಿ ಗಿಡಗಂಟಿ ಬೆಳೆದಿದೆ.
ಇದರ ಮೇಲೆ ಬರಹಗಳಿವೆ. ಈ ಬೆಟ್ಟ ಗುರುವಾರ ಇದಕ್ಕಿದ್ದಂತೆ ಮಹತ್ವ ಪಡೆದಕೊಂಡಿತು. `ಈ ಬೆಟ್ಟದ ಕಲ್ಲನ್ನು ಪರೀಕ್ಷೆ ನಡೆಸಿದಾಗ ಇದು ಬಾಹ್ಯಾಕಾಶದಿಂದ ಬಿದ್ದ ಉಲ್ಕಾಶಿಲೆಯ ತುಣಕು ಎಂಬುದು ಗೊತ್ತಾಗಿದೆ. 45 ಡಿಗ್ರಿ ಕೋನದಲ್ಲಿ ಬಿದ್ದಿದೆ. ಪ್ರತಿ ಸೆಕೆಂಡಿಗೆ 30 ಕಿ.ಮೀ ವೇಗದಲ್ಲಿ ನೆಲಕ್ಕೆ ಅಪ್ಪಳಿಸಿದೆ. ಇದರ ಎತ್ತರ ಸಾಕಷ್ಟಿತ್ತು.
ಬಿಸಿಲು, ಮಳೆಯಿಂದ ಸವೆದು ಈಗ 10 ಮೀಟರ್ ಎತ್ತರ, 45 ಮೀಟರ್ ಸುತ್ತಳತೆ ಹೊಂದಿದೆ. ಇದೊಂದು ಅಪರೂಪದ ಆಕಾಶಕಾಯ ಎಂಬ ಸಂಶೋಧಕರ ಅನಿಸಿಕೆಯನ್ನು ಟಿ.ವಿ ವಾಹಿನಿಗಳು ಬಿತ್ತರಿಸಿವೆ.
ಹವ್ಯಾಸಿ ಸಂಶೋಧಕ ಜಿ.ಆರ್.ಶ್ರೀನಿವಾಸ್, ಬಾಹ್ಯಾಕಾಶ ಸಂಶೋಧನಾ ವಿದ್ಯಾರ್ಥಿ ಪ್ರವೀಣ್ ಒಡೆಯರ್, ದೃಶ್ಯ ಮಾಧ್ಯಮದೊಂದಿಗೆ ಬೆಂಗಳೂರಿನಿಂದ ಸ್ಥಳಕ್ಕೆ ಆಗಮಿಸಿ ಬೆಟ್ಟದ ಬಗ್ಗೆ ಮಾಹಿತಿ ನೀಡುತ್ತಿದ್ದರು.
ತಹಶೀಲ್ದಾರ್ ಎಚ್.ಎಸ್.ಸತೀಶ್ಬಾಬು ಸ್ಥಳಕ್ಕೆ ಆಗಮಿಸಿ ಶ್ರೀನಿವಾಸ್, ಪ್ರವೀಣ್ ಜೊತೆ ಚರ್ಚಿಸಿದರು.