ನವದೆಹಲಿ (ಪಿಟಿಐ): ಮುಸ್ಲಿಮರಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತಾದ ಹೇಳಿಕೆ ನೀಡಿ, ವಿವಾದ ಸೃಷ್ಟಿಸಿದ್ದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಅದೇ ವಿಷಯವನ್ನು ಪುನರ್ ಪ್ರಸ್ತಾಪಿಸಿ, ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದ ಮತ್ತೊಬ್ಬ ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮ ಅವರಿಗೆ ಕೇಂದ್ರ ಚುನಾವಣಾ ಆಯೋಗವು ಶನಿವಾರ ನೋಟಿಸ್ ಜಾರಿಗೊಳಿಸಿದ್ದು, ಸೋಮವಾರದೊಳಗೆ ಪ್ರತಿಕ್ರಿಯೆ ತಿಳಿಸುವಂತೆ ಆದೇಶಿಸಿದೆ.
ಪ್ರಸ್ತುತ ಉತ್ತರ ಪ್ರದೇಶದಲ್ಲಿ ಚುನಾವಣಾ ನೀತಿ ಸಂಹಿತೆಯೂ ಜಾರಿಯಲ್ಲಿರುವುದರಿಂದಾಗಿ ಬೇಣಿ ಅವರ ಹೇಳಿಕೆಯು ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದಂತಾಗಿದೆ ಎಂದು ಆಯೋಗವು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ ಈ ವಿಷಯದ ವಿವಾದಕ್ಕೆ ಸಂಬಂಧಿಸಿದಂತೆ ವರ್ಮ ಅವರು ಆಯೋಗದಿಂದ ನೋಟಿಸ್ ಪಡೆದ ಕೇಂದ್ರ ಸಚಿವರಲ್ಲಿ ಎರಡನೇ ವ್ಯಕ್ತಿ. ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮೊದಲಿಗರಾಗಿದ್ದಾರೆ.
~ವರ್ಮ ಅವರು ಇಲ್ಲಿನ ಫರೂಖಾಬಾದ್ ನಲ್ಲಿ ನಡೆದ ಚುನಾವಣೆ ಆಂದೋಲನದಲ್ಲಿ ಮುಸ್ಲಿಮರ ಒಳ ಮೀಸಲಾತಿಗೆ ಸಂಬಂಧಿಸಿದಂತೆ ವಿಷಯವನ್ನು ಪ್ರಸ್ತಾಪಿಸಿ, ಈ ಹಿಂದೆ ಸಲ್ಮಾನ್ ಖುರ್ಷಿದ್ ಅವರು ಹೇಳಿಕೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿ, ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದರು.
ಭಾಷಣದ ವಿಡಿಯೋ ಚಿತ್ರೀಕರಣವನ್ನು ಪರೀಶಿಲಿಸಿದ ಚುನಾವಣಾ ಆಯೋಗವು ಇದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದಂತಾಗಿದೆ.
ಏಕೆ ನಿಮ್ಮ ವಿರುದ್ಧ ಕ್ರಮ ತೆಗೆದು ಕೊಳ್ಳಬಾರದು. ಈ ಬಗ್ಗೆ ಫೆ.20 ಸಂಜೆ 5ರೊಳಗೆ ಕಾರಣ ತಿಳಿಸಿ, ಎಂದು ಆಯೋಗವು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.
ಈ ಹಿಂದೆ ವರ್ಮ ಅವರು ಚುನಾವಣಾ ರ್ಯಾಲಿಯಲ್ಲಿ `ಮುಸ್ಲಿಮರಿಗೆ ನೀಡುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು~ ಎಂಬ ಹೇಳಿಕೆಯನ್ನು ನೀಡಿದ್ದರು. ಒಂದು ವೇಳೆ ಈ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ನನಗೆ ನೋಟಿಸ್ ನೀಡುವುದಾದರೆ ನೀಡಲಿ~ ಎಂದೂ ಆಯೋಗಕ್ಕೆ ನೇರ ಸವಾಲು ಹಾಕಿದ್ದರು.