ನವದೆಹಲಿ (ಪಿಟಿಐ): ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸುವಂತೆ ಉತ್ತರ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡುವ ಜತೆಗೆ `ನೋಟಿಸ್ ನೀಡುವಂತೆ~ ಸವಾಲು ಎಸೆದಿದ್ದ ಕೇಂದ್ರ ಉಕ್ಕು ಖಾತೆ ಸಚಿವ ಬೇಣಿ ಪ್ರಸಾದ್ ವರ್ಮ ಅವರಿಗೆ ಕೊನೆಗೂ ಚುನಾವಣಾ ಆಯೋಗ ಶನಿವಾರ ನೋಟಿಸ್ ಜಾರಿ ಮಾಡಿದೆ.
ಖಾಸಗಿ ಸುದ್ದಿವಾಹಿನಿಯೊಂದು ಸೆರೆ ಹಿಡಿದ ಸಚಿವರ ಭಾಷಣದ ವಿಡಿಯೊ ದೃಶ್ಯಾವಳಿ ವೀಕ್ಷಿಸಿದ ಆಯೋಗ `ಸಚಿವರ ಹೇಳಿಕೆಯಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ~ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟಿದೆ. `ನಿಮ್ಮ ವಿರುದ್ಧ ಯಾಕೆ ಕ್ರಮ ಜರುಗಿಸಬಾರದು~ ಎಂದು ಕೇಳಿರುವ ಆಯೋಗ, ನೋಟಿಸ್ಗೆ ಸೋಮವಾರ ಸಂಜೆಯೊಳಗೆ ಉತ್ತರಿಸುವಂತೆ ಸೂಚಿಸಿದೆ. ತಪ್ಪಿದರೆ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದೆ.
ಈ ನಡುವೆ ನೋಟಿಸ್ ಪಡೆದ ನಂತರ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಬೇಣಿ, `ನಾನು ಚುನಾವಣಾ ಆಯೋಗವನ್ನು ಗೌರವಿಸುತ್ತೇನೆ. ಕಳೆದ ಕೆಲವು ತಿಂಗಳಿನಿಂದ ಪ್ರತಿ ದಿನ ಐದಾರು ಚುನಾವಣಾ ರ್ಯಾಲಿ, ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದು ಯಾವ ಸಭೆಯಲ್ಲಿ, ಯಾವ ವಿಷಯಕ್ಕೆ ಸಂಬಂಧಿಸಿದಂತೆ ಆ ಮಾತನ್ನು ಆಡಿದ್ದೇನೆ ಎಂಬುದು ನನಗೆ ಸರಿಯಾಗಿ ನೆನಪಿಲ್ಲ~ ಎಂದು ಹೇಳಿದ್ದಾರೆ.
`ಫರೂಕಾಬಾದ್ ಜಿಲ್ಲೆಯ ಕೈಮ್ಗಂಜ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನಾನು ಮುಸ್ಲಿಮರ ಮೀಸಲಾತಿ ಕುರಿತು ಮಾತನಾಡಿಲ್ಲ. ಒಂದು ವೇಳೆ ಮಾತನಾಡಿದ್ದೇನೆ ಎಂದಾದರೂ ಅದರಲ್ಲಿ ಯಾವ ತಪ್ಪೂ ಇಲ್ಲ ಎಂಬುದು ನನ್ನ ಭಾವನೆ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.