ಬೆಳಗಾವಿ: ‘ನಮ್ದೇನೂ ಇಲ್ರಿ. ಎಲ್ಲಾ ಗೌಡ್ರು ಹೇಳಿದಂಗೇರಿ. ಅವರು ಯಾರಿಗೆ ವೋಟ್ ಹಾಕು ಅಂತಾರ್ರಿ. ಅವರಿಗ ಹಾಕೋದ್ರಿ’.
ಬೈಲಹೊಂಗಲದ ಅರಳಿಕಟ್ಟೆ ಮೇಲೆ ರುಮಾಲು ಸುತ್ತಿಕೊಂಡು ಕುಳಿತ ವ್ಯಕ್ತಿಯ ಮಾತು ಇದು. ಆತ ತನ್ನ ಹೆಸರನ್ನು ಹೇಳಲು ಬಯಸಲಿಲ್ಲ. ‘ಇಲ್ಲಿ ನೀವು ಯಾರನ್ನು ಕೇಳಿದರೂ ಇಷ್ಟೇ ಮಾಹಿತಿ ಸಿಗೋದು’ ಎಂದು ಪಕ್ಕದವ ಉಸುರಿದ.
ಬೆಳಗಾವಿ ಜಿಲ್ಲೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಕುರುಹು ಇದು. ಇಲ್ಲಿನ ಕೆಲವು ಭಾಗಗಳಲ್ಲಿ ಮತದಾರರಿಗೆ ಅವರದ್ದೇ ಎನ್ನುವ ಆಯ್ಕೆ ಈಗಲೂ ಇಲ್ಲ. ಯಾರಿಗೆ ಮತ ಚಲಾಯಿಸಬೇಕು ಎನ್ನುವುದನ್ನು ಊರಿನ ಗೌಡರು, ದೇಸಾಯಿಗಳೇ ನಿರ್ಧರಿಸುತ್ತಾರೆ. ಮತದಾರರು ಅದರಂತೆ ನಡೆದುಕೊಳ್ಳುತ್ತಾರೆ.
ಸಾಮಾನ್ಯವಾಗಿ ಚುನಾವಣೆ ಬಂದಾಗ ರಾಜಕಾರಣಿಗಳು ಮೆತ್ತಗಾಗುತ್ತಾರೆ. ನಯ, ವಿನಯ ರೂಢಿಸಿಕೊಳ್ಳುತ್ತಾರೆ. ಕೈ ಮುಗಿದು ಮತ ಕೇಳು-ವುದು ಸಂಪ್ರದಾಯ. ಆದರೆ ಬೆಳಗಾವಿ ಜಿಲ್ಲೆಯ ಕೆಲವು ಕಡೆ ಮತ ಕೇಳುವುದು ಎಂದರೆ ಬೈಗುಳಗಳ ಸುರಿಮಳೆ. ಎಲ್ಲ ಅವಾಚ್ಯ ಶಬ್ದಗಳ ಪ್ರಯೋಗ. ಜೊತೆಗೆ ಜಬರ್ದಸ್ತ್ ಬೇರೆ.
ಸುಶಿಕ್ಷಿತರು ಕಿವಿಯಿಂದ ಕೇಳಲು ಸಾಧ್ಯವೇ ಇಲ್ಲದ ಶಬ್ದಗಳ ಪ್ರಯೋಗ ಮಾಡಿ, ‘ಈ ಸಲಾ ನಮಗ ವೋಟ್ ಕೊಡದಿದ್ದರ ನೋಡ್ ಮತ್ತ’ ಎಂಬ ಎಚ್ಚರಿಕೆಯೂ ಅಭ್ಯರ್ಥಿ ಬಾಯಿಂದ ಬರುತ್ತದೆ. ಇದು ನಡೆಯುವುದು ಬಹಿರಂಗ ಸಭೆಯಲ್ಲಿ ಅಲ್ಲ. ಗ್ರಾಮ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರನ್ನು ಒಂದೆಡೆ ಸೇರಿಸಿ ಮತ ಕೇಳುವಾಗ ಬರುವ ಮಾತಿನ ಪ್ರಯೋಗಗಳು ಇವು. ಊರ ಗೌಡನ ಮನೆಗಳಲ್ಲಿಯೂ ಇಂತಹ ಬೈಗುಳ ಭಾಷೆ ಮಾಮೂಲು.
ಈ ರೀತಿಯ ಬೈಗುಳ ಬರೀ ಮತದಾರರ ಮೇಲೆ ಮಾತ್ರ ಅಲ್ಲ. ಮಠಗಳ ಸ್ವಾಮೀಜಿಗಳೂ ಇಂತಹ ಪ್ರಯೋಗಗಳ ಬಲಿಪಶು ಆಗುತ್ತಾರಂತೆ. ಬಹಿರಂಗವಾಗಿ ಮಠಾಧೀಶರ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುವ ಮುಖಂಡರು, ಏಕಾಂತದಲ್ಲಿ ಸ್ವಾಮೀಜಿಗಳಿಗೂ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ ಎಂದು ಕೆಲವರು ತಾವು ನೋಡಿದ ಸತ್ಯವನ್ನು ಬಹಿರಂಗ ಮಾಡಿದರು.
ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಒಂದು ಸಾಮ್ರಾಜ್ಯವಿದ್ದರೆ ರಾಮದುರ್ಗದಲ್ಲಿ ಮತ್ತೊಂದು ಸಾಮ್ರಾಜ್ಯವಿದೆ. ಹುಕ್ಕೇರಿಯನ್ನು ಇನ್ನೊಂದು ಮನೆತನ ಆಳುತ್ತಿದೆ. ಅಥಣಿ, ಸೌದತ್ತಿ, ನಿಪ್ಪಾಣಿ, ಬೈಲಹೊಂಗಲದ ಸ್ಥಿತಿ ಸ್ವಲ್ಪ ಪರವಾಗಿಲ್ಲ ಎನ್ನುವ ಹಾಗೆ ಇವೆ.
ಈ ಸಾಮ್ರಾಜ್ಯಗಳನ್ನು ಒಂದೊಂದು ಕುಟುಂಬಗಳು ಆಳುತ್ತಿವೆ. ಅಲ್ಲದೆ ಈ ಕುಟುಂಬಗಳ ಸದಸ್ಯರು ಎಲ್ಲ ಪಕ್ಷದೊಳಗೂ ಇದ್ದಾರೆ. ಒಂದು ಪಕ್ಷ ಹೋಗಿ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದರೂ ಈ ಕುಟುಂಬ ಅಧಿಕಾರದಿಂದ ವಂಚಿತವಾಗುವುದಿಲ್ಲ. ಅಧಿಕಾರ ಇಲ್ಲದೇ ಹೋದರೆ ತಮ್ಮನ್ನು ಮುಗಿಸಿ–ಬಿಡಬಹುದು ಎಂಬ ಭಯ ಸದಾ ಇವರಿಗಿದೆ. ಇಲ್ಲಿ ಪಕ್ಷ ಮುಖ್ಯವಲ್ಲ. ಪಾಳೇಗಾರಿಕೆ ಕುಟುಂಬದ ಕುಡಿಗಳೇ ಮುಖ್ಯ. ಅವರಲ್ಲಿ ಉತ್ತಮ ಹೊಂದಾಣಿಕೆ ಇದೆ. ಒಬ್ಬರ ಸಾಮ್ರಾಜ್ಯದೊಳಕ್ಕೆ ಇನ್ನೊಬ್ಬರು ಕಾಲಿಡುವುದಿಲ್ಲ. ಪರಸ್ಪರ ಸಹಕಾರ ಕೊಡುತ್ತಾರೆ. ಇಲ್ಲಿ ಪಕ್ಷಕ್ಕಿಂತ ಜಾತಿಯೇ ಪ್ರಮುಖ. ಅವರನ್ನು ಗೆಲ್ಲಿಸಲು ಇವರು, ಇವರನ್ನು ಗೆಲ್ಲಿಸಲು ಅವರು ಕೈಜೋಡಿಸುತ್ತಾರೆ.
1981ರಲ್ಲಿ ನಿಪ್ಪಾಣಿಯಲ್ಲಿ ತಂಬಾಕು ಚಳವಳಿ ನಡೆದಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಅಂತಹ ಜನಾಂದೋಲನಗಳು ಯಾವುದೂ ನಡೆದಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಕಳಸಾ–ಬಂಡೂರಿ ಚಳವಳಿ ನಡೆಯುತ್ತಿದ್ದರೂ ಸರ್ಕಾರ ಅದಕ್ಕೆ ಗಮನ ನೀಡುತ್ತಿಲ್ಲ. ಅತ್ಯಂತ ಅಮಾನವೀಯವಾದ ಸಾಲಹಳ್ಳಿ ಬೆತ್ತಲೆ ಪ್ರಕರಣ, ಬೆಂಡಿಗೇರಿಯಲ್ಲಿ ಮಲ ತಿನ್ನಿಸಿದ ಪ್ರಕರಣಗಳು ನಡೆದ ಈ ಜಿಲ್ಲೆಯಲ್ಲಿ ಆ ಮಟ್ಟದ ಪರಿಸ್ಥಿತಿ ಈಗಿಲ್ಲವಾದರೂ ಪಾಳೇಗಾರಿಕೆ ಇನ್ನೂ ಸಂಪೂರ್ಣ ನಾಶವಾಗಿಲ್ಲ. ಮಹಾರಾಷ್ಟ್ರದ ಪೇಶ್ವೆಗಳ ಪ್ರಭಾವಕ್ಕೆ ಒಳಗಾದ ಬೆಳಗಾವಿಯಲ್ಲಿ ಇನ್ನೂ ಅದರ ಕುರುಹುಗಳು ಇವೆ. ಮಹಾರಾಷ್ಟ್ರದಿಂದ ಪೇಶ್ವಾಯಿ ಸಂಸ್ಕೃತಿ ಬಂದ ಹಾಗೆ ಶಾಹೂ ಮಹಾರಾಜ್, ಅಂಬೇಡ್ಕರ್, ಜ್ಯೋತಿಬಾ ಪುಲೆ ಅವರ ಸಂಸ್ಕೃತಿಗಳು ಹರಿದುಬರಲಿಲ್ಲ ಅಥವಾ ಅದು ಉಳಿದಿಲ್ಲ.
ಮತದಾರರು ಮಾಧ್ಯಮದವರಿಗೆ ತಮ್ಮ ಹೆಸರು ಹೇಳಲು ಬಯಸುವುದಿಲ್ಲ. ಭಾವಚಿತ್ರ ತೆಗೆಯಲು ಅವಕಾಶ ಕೊಡುವುದಿಲ್ಲ. ‘ಹೀಗೆಲ್ಲಾ ಮಾಡಿದರೆ ನಮಗೆ ಹೊಡೀತಾರ್ರಿ’ ಎಂದು ಗುಟ್ಟು ಹೇಳಿದಂತೆ ಹೇಳುತ್ತಾರೆ. ಇಲ್ಲಿ ಚುನಾವಣೆ ಎಂದರೆ ಪಾಳೇಗಾರರ ಆಟ ಅಷ್ಟೆ.
ಜಿಲ್ಲೆಯಲ್ಲಿ ಪಾಳೇಗಾರಿಕೆ ಇನ್ನೂ ಜೀವಂತವಾಗಿರುವುದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಗೊತ್ತಾಗಿದೆ. ‘ಗ್ರಾಮಗಳಲ್ಲಿ ಪ್ರಚಾರಕ್ಕೆ ಹೋಗುವಾಗ ಗೌಡರು, ದೇಸಾಯಿ ಅವರನ್ನು ಕರೆದುಕೊಂಡೇ ಹೋಗಬೇಕು. ಅವರು ಹೇಳಿದಂತೆ ಜನರು ಕೇಳುತ್ತಾರೆ’ ಎನ್ನುತ್ತಾರೆ ಅವರು.
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಕೊರತೆ, ಶೌಚಾಲಯಗಳ ಕೊರತೆ, ಬಾಲ್ಯ ವಿವಾಹದ ಪಿಡುಗುಗಳೆಲ್ಲ ಇವೆ. ಇದಕ್ಕೂ ಪಾಳೇಗಾರಿಕೆ ಸಂಸ್ಕೃತಿ ಜೀವಂತ ಇರುವುದೇ ಕಾರಣ ಎಂಬ ಅನುಮಾನ ಅವರದು. ‘ಪಾಳೇಗಾರಿಕೆಯ ಮತ್ತೊಂದು ರೂಪವೇ ಇಂದಿನ ರಾಜಕಾರಣ’ ಎಂದು ಕಳಸಾ– ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಹೇಳುತ್ತಾರೆ. ‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಗುಲಾಮರಂತೆ ಕಾಣುತ್ತಿದ್ದರು. ಈಗ ನಮ್ಮವರೇ ಜನರನ್ನು ಗುಲಾಮರಂತೆ ಕಾಣುತ್ತಿದ್ದಾರೆ. ನಾವು ರಾಜ ಮಹಾರಾಜರನ್ನು ಓಡಿಸಿದ್ದೇವೆ. ಬ್ರಿಟಿಷರನ್ನೂ ಓಡಿಸಿದ್ದೇವೆ. ನವ ಪಾಳೇಗಾರರನ್ನೂ ಓಡಿಸುವ ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೆ ಕಾಯಬೇಕು’ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸುತ್ತಾರೆ.
ಕಳಸಾ– ಬಂಡೂರಿ ಯೋಜನೆಗೆ 1960ರಲ್ಲಿಯೇ ಗುದ್ದಲಿ ಪೂಜೆ ಆಗಿದೆ. ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಕರ್ನಾಟಕದ ಯಾವುದೇ ರಾಜಕಾರಣಿಗೆ ಈ ಬಗ್ಗೆ ಗಮನವೇ ಇಲ್ಲ. ವಿಧಾನಸಭೆಯಲ್ಲಿ ಬಹುಮತ ನೀಡಿದರೆ ಕಳಸಾ–ಬಂಡೂರಿ ಪೂರ್ಣಗೊಳಿಸುವುದುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಅವರು ತಮ್ಮ ಮಾತನ್ನು ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಜಿಲ್ಲೆಯಲ್ಲಿ ಪಾಳೇಗಾರಿಕೆ ಇದೆ. ಗೂಂಡಾ ಸಂಸ್ಕೃತಿ ಇದೆ. ಅತ್ಯಂತ ಶ್ರೀಮಂತರು ಮತ್ತು ಕಡುಬಡವರು ಇಲ್ಲಿ ಜಾಸ್ತಿ. ಮದ್ಯ, ಸಕ್ಕರೆ ಲಾಬಿ ವಿಪರೀತ. ಇವೆಲ್ಲಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ರಾಮದುರ್ಗದ ವಿ.ಪಿ.ಕುಲಕರ್ಣಿ ಹೇಳುತ್ತಾರೆ.
ರಾಮದುರ್ಗದ ಸ್ಥಿತಿ ಬದಲಾಗಿದೆ ಎನ್ನುವುದಕ್ಕೆ ಎಡಪಂಥೀಯ ನಂಬಿಕೆ ಇಟ್ಟುಕೊಂಡಿರುವ ತಾವು ಇನ್ನೂ ಚಳವಳಿಯಲ್ಲಿ ಸಕ್ರಿಯವಾಗಿರುವುದೇ ಉದಾಹರಣೆ ಎಂದೂ ಅವರು ಹೇಳುತ್ತಾರೆ. ಗೋಕಾಕದಲ್ಲಿಯೂ ಪಾಳೇಗಾರಿಕೆ ಕಡಿಮೆಯಾಗುತ್ತಿದೆ. ಅಲ್ಲಿನ ಯಜಮಾನರು ಹಳೆ ಪದ್ಧತಿಯನ್ನು ಬಿಡುತ್ತಿದ್ದಾರೆ. ಅಥಣಿಯಲ್ಲಿ ಸಕ್ಕರೆ ಲಾಬಿ ಇದೆ. ಸೌದತ್ತಿಯಲ್ಲಿ ವ್ಯಾಪಾರಿ–ಗಳು ಜೋರಾಗಿದ್ದಾರೆ ಎಂದು ಅವರು ವ್ಯಾಖ್ಯಾನಿಸುತ್ತಾರೆ.
‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಜೆಗಳು ಇನ್ನೂ ಪ್ರಭು–ಗಳಾಗಿಲ್ಲ. ಚುನಾವಣೆಯ ಸಮಯದಲ್ಲಿಯಾದರೂ ಅವರು ಸುಲ್ತಾನರಾಗಬೇಕು. ಆದರೆ ಆಗಲೂ ಅವರು ರಾಜರಲ್ಲ. ಇಲ್ಲಿರುವುದು ಎರಡೇ ವರ್ಗ. ಒಂದು ಆಳುವ ವರ್ಗ. ಇನ್ನೊಂದು ಆಳಿಸಿಕೊಳ್ಳುವ ವರ್ಗ. ಶ್ರೀಮಂತರು ಮತ್ತು ಬಡವರು ಎಂಬ ಎರಡೇ ದರ್ಜೆಯ ಜನರು ಇಲ್ಲಿದ್ದಾರೆ. ಸರ್ಕಾರಿ ನೌಕರರನ್ನು ಬಿಟ್ಟರೆ ಮಧ್ಯಮ ವರ್ಗ ಇಲ್ಲಿ ಕಡಿಮೆ. ಅದಕ್ಕೇ ಇಲ್ಲಿ ಪಾಳೇಗಾರಿಕೆ ಇನ್ನೂ ನಡೆಯುತ್ತಿದೆ’ ಎಂದು ನಾಟಕಕಾರ ಡಿ.ಎಸ್.ಚೌಗಲೆ ಹೇಳುತ್ತಾರೆ.
ಸಾಮಾಜಿಕ ಕಳಕಳಿಯ ನಾಯಕರ ಕೊರತೆ ಇದೆ. ಈಗಿರುವ ನಾಯಕರಿಗೆ ದೂರದೃಷ್ಟಿ ಇಲ್ಲ. ಅದಕ್ಕೇ ಇಲ್ಲಿ ಸಮಾಜವಾದವೂ ಇಲ್ಲ. ಸಾಮಾಜಿಕ ನ್ಯಾಯವೂ ಇಲ್ಲ ಎಂದು ಅವರು ವಿಷಾದಿಸುತ್ತಾರೆ.ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಎಷ್ಟು ಬಾರಿ ಕ್ಷೇತ್ರ ಸುತ್ತಾಡಿದ್ದಾರೆ. ಎಷ್ಟು ಜನರಿಗೆ ಕೈಮುಗಿದ್ದಿದ್ದಾರೆ ಎನ್ನುವುದಕ್ಕಿಂತ, ಸಾಮ್ರಾಜ್ಯದ ಆಳ್ವಿಕೆ ನಡೆಸುವವರು ಎಷ್ಟು ಜಬರದಸ್ತ್ ಮಾಡಿದ್ದಾರೆ ಎನ್ನುವುದರ ಮೇಲೆಯೇ ಸೋಲು ಗೆಲುವು ನಿಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.