ಬೈಲಹೊಂಗಲ: ತಾಲ್ಲೂಕಿನ ಮೇಕಲಮರ್ಡಿ ಗ್ರಾಮದಲ್ಲಿಅಕ್ರಮವಾಗಿ ಬೆಳೆಸಿದ್ದ ಸುಮಾರು 8 ಲಕ್ಷ ರೂಪಾಯಿಗಳ ಮೌಲ್ಯದ ಮಾದಕ ವಸ್ತುಗಳ ತಯಾರಿಕೆಯ ಗಸಗಸಿ ಗಿಡಗಳನ್ನು ಶನಿವಾರ ವಶಪಡಿಸಿಕೊಂಡ ಪೊಲೀಸರು, ಅದನ್ನು ಬೆಳೆಸಿದ್ದ ಆರು ಜನರನ್ನು ಬಂಧಿಸಿದ್ದಾರೆ.
ಮೇಲಕಮರ್ಡಿ ಗ್ರಾಮದ ಫಕ್ರುಸಾಬ್ ಮದರಸಾಬ ಮೋದಗಿ, ರಾಜೇಸಾಬ ಮೀರಾಸಾಬ್ ಮೋದಗಿ, ಜಿನ್ನಪ್ಪ ಫಕೀರಪ್ಪ ಹುಲಮನಿ, ಬಾಹುಬಲಿ ಕುಬೇಂದ್ರ ಹುಲಮನಿ, ಇಮಾಮಸಾಬ್ ಮೀರಾಸಾಬ್ ಮೋದಗಿ, ಮಲಿಕಸಾಬ್ ಮೀರಾಸಾಬ್ ಮೋದಗಿ ಬಂಧಿತರು.
ಇವರು ತಮ್ಮ ಹೊಲದಲ್ಲಿ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಜೊತೆಗೆ ಗಸಗಸಿ (ಅಫೀಮು) ಗಿಡಗಳನ್ನು ಬೆಳೆಸಿದ್ದು ಬೆಳಗಾವಿ ಹಾಗೂ ಕೊಲ್ಲಾಪುರಗಳಿಗೆ ಮಾರಾಟ ಮಾಡುವ ಕುರಿತು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್.ಪಿ. ಸಂದೀಪ ಪಾಟೀಲ ತಿಳಿಸಿದ್ದಾರೆ.
ಗ್ರಾಮಸ್ಥರು ನೀಡಿದ ಮಾಹಿತಿಯನ್ವಯ ಸಿಪಿಐ ಡಾ.ಅರುಣಕುಮಾರ ಹಪ್ಪಳಿ, ಪಿಎಸ್ಐ ಪಿ.ಬಿ. ನೀಲಗಾರ ಹಾಗೂ ಸಿಬ್ಬಂದಿ ಶುಕ್ರವಾರ ಸಂಜೆ ಹಾಗೂ ಶನಿವಾರ ದಾಳಿ ನಡೆಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.