ಮಧ್ಯಾಹ್ನ ಒಂದು ಗಂಟೆಯಾಗುತ್ತಿದ್ದಂತೆ ಟೀವಿ ಆನ್ ಮಾಡಿದ ಗೃಹಿಣಿಯೊಬ್ಬಳು ತನ್ನ ಮಗುವಿಗೆ ಊಟ ಮಾಡಿಸುತ್ತಾ ಟೀವಿ ಪರದೆ ಮುಂದೆ ಕುಳಿತುಕೊಂಡರು. ಅದು ಅಡುಗೆ ಕಾರ್ಯಕ್ರಮ. ಅದರಲ್ಲಿ ಮೊದಲು ಇಡ್ಲಿಯನ್ನು ಪುಡಿ ಮಾಡಿಕೊಂಡ ಬಾಣಸಿಗ ಬಾಣೆಲೆಗೆ ತುಪ್ಪ ಹಾಕಿದರು. ಅದಕ್ಕೆ ಇಂಗು, ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಮೆಣಸಿನಕಾಯಿ, ಅರಿಶಿಣ ಎ್ಲ್ಲಲವನ್ನೂ ಒಂದೊಂದಾಗಿ ಹಾಕಲಾಯಿತು. ಇಷ್ಟನ್ನೂ ಕಲಕಿ ನಂತರ ಕಾಯಿತುರಿ ಹಾಕಿ ಹುರಿದರು. ಆಮೇಲೆ ಅದಕ್ಕೆ ಪುಡಿ ಮಾಡಿಟ್ಟುಕೊಂಡಿದ್ದ ಇಡ್ಲಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿಸೊಪ್ಪು, ಲಿಂಬೆರಸ ಹಾಕಿ ಕಲಕಿದರು. ಬಾಣಲೆಯೊಳಗಿಂದ ಗಮಗಮ ವಾಸನೆ ಬರುತ್ತಿದ್ದಂತೆ ಸೌಟಿನಿಂದ ಒಂದಿಷ್ಟು ತೆಗೆದು ನಾಲಿಗೆ ಮೇಲಿಟ್ಟುಕೊಂಡ ಅವರು `ಮ್ಮ್ಮ್... ಹಾಹಾಹಾ...~ ಎಂಬ ಉದ್ಗಾರ ತೆಗೆದು ಇದೋ `ಇಡ್ಲಿ ಇಷ್ಟಾರ್ಥ~ ಎಂದು ಹೇಳುತ್ತಿದರು.
ಹೀಗೆ ಒಂದೆರಡು ತಿನಿಸುಗಳ ಮಾಡಿ ತೋರಿಸಿದರು. ಆದರೆ ಮಗು ಊಟ ಮಾಡಿ ಮಲಗಿತ್ತು. ಆ ತಾಯಿ ಟೀವಿ ನೋಡುವುದರಲ್ಲಿ ಮಗ್ನರಾಗಿದ್ದರು. ಗೃಹಿಣಿಗೆ ಅತ್ತೆ ಕೂಗಿದಾಗಷ್ಟೇ ಎಚ್ಚರವಾಗಿದ್ದು.
ಪ್ರತಿ ದಿನ ಮಧ್ಯಾಹ್ನ 1ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ `ಬೊಂಬಾಟ್ ಭೋಜನ~ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಮೈಮರೆಯುವ ಗೃಹಿಣಿಯರ ಸಂಖ್ಯೆ ಬಹಳಷ್ಟಿದೆಯಂತೆ. ನಟ, ಕಿರುತೆರೆ ನಿರ್ದೇಶಕ ಸಿಹಿಕಹಿ ಚಂದ್ರು ನಡೆಸಿಕೊಡುವ ಈ ಕಾರ್ಯಕ್ರಮ ರಾಜ್ಯದಾದ್ಯಂತ ಮನೆಮಾತಾಗಿದೆ. ಮಕ್ಕಳಿಂದ ವೃದ್ಧರವರೆಗೂ ಇಷ್ಟಪಡುವ ಕಾರ್ಯಕ್ರಮ ಯಶಸ್ವಿಯಾಗಿ 650 ಎಪಿಸೋಡ್ಗಳನ್ನು ಮುಗಿಸಿದೆ ಎಂದು ಹೇಳುತ್ತಾ ಮಾತಿಗಿಳಿದ ಸಿಹಿಕಹಿ ಚಂದ್ರು ತಮ್ಮ ಬೊಂಬಾಟ್ ಭೋಜನದ ಪಯಣವನ್ನು ಬಿಚ್ಚಿಟ್ಟರು.
2010 ಫೆಬ್ರುವರಿಯಲ್ಲಿ ಆರಂಭವಾದ `ಬೊಂಬಾಟ್ ಭೋಜನ~ ಅಡುಗೆ ಕಾರ್ಯಕ್ರಮ ಪ್ರತಿ ಭಾನುವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1ಕ್ಕೆ ಪ್ರಸಾರವಾಗುತ್ತಿದೆ. ಕಳೆದ ಆ. 2ರಂದು 650 ಕಂತುಗಳನ್ನು ಪೂರೈಸಿದೆ.
ಯಾವುದೇ ಪ್ರದೇಶದ ರುಚಿಗೆ ತಮ್ಮ ಪ್ರಯೋಗಗಳ ಮೂಲಕ ಹೊಸ ರೂಪು ನೀಡಿ, ಅದಕ್ಕೊಂದು ನೂತನ ಹೆಸರನ್ನಿಡುವ ಚಂದ್ರು ತಮ್ಮ ಕೈ ರುಚಿಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೂ ತೋರಿಸಿದ್ದಾರೆ.
ಚಂದ್ರು ಅವರೇ ಹೇಳಿಕೊಳ್ಳುವಂತೆ ಕಾರ್ಯಕ್ರಮದಿಂದ ಪ್ರಭಾವಿತರಾದ ಮಕ್ಕಳು ಸಹ ಈಗ ಅಡುಗೆ ಮಾಡಲು ಮುಂದಾಗುತ್ತಿದ್ದಾರಂತೆ. ಅದಕ್ಕೆಂದೇ ಆಗಸ್ಟ್ 22ರಿಂದ ಪ್ರತಿ ಬುಧವಾರ ಮಧ್ಯಾಹ್ನ 1ಕ್ಕೆ ಮಕ್ಕಳಿಗಾಗಿ `ಬೇಕಿಂಗ್ ಸೆಕ್ಷನ್~ ಕಾರ್ಯಕ್ರಮ ಆರಂಭಿಸಿದ್ದಾರೆ. ಇಲ್ಲಿ ಹತ್ತು ಮಕ್ಕಳೊಂದಿಗೆ ಸಂವಾದ ಹಾಗೂ ಬೇಕಿಂಗ್ ವಿಧಾನವನ್ನು ಹೇಳಿಕೊಡುತ್ತಾರೆ. ಬಿಸ್ಕತ್ತು, ಬ್ರೆಡ್, ಕ್ರೀಂ ಹಾಗೂ ಕೇಕ್ ತಯಾರಿಸುವ ವಿಧಾನ ಹೇಳಿಕೊಡಲಿದ್ದಾರೆ.
ಇದುವರೆಗೆ ಅಡುಗೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಪಾಕಶಾಸ್ತ್ರದ ವಿವರಗಳನ್ನೊಳಗೊಂಡ ಪುಸ್ತಕಗಳನ್ನು ಹೊರತಂದಿದ್ದಾರೆ. 650ನೇ ಕಂತಿನ ಸಂಭ್ರಮಾಚರಣೆ ನೆನಪಿನಲ್ಲಿ `ಬೊಂಬಾಟ್ ಭೋಜನ~ ಪುಸ್ತಕದ ನಾಲ್ಕನೇ ಭಾಗವನ್ನು ಬಿಡುಗಡೆ ಮಾಡಲಾಯಿತು. ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಅನೇಕ ಹೊಸ ಹೊಸ ಖಾದ್ಯಗಳ ಮಾಡಲು ಕಲಿತ ಗೃಹಿಣಿಯರು ಇಂದಿಗೂ ಕರೆ ಮಾಡಿ ಅವರ ಕೈರುಚಿಯ ಇನ್ನಷ್ಟು ಟಿಪ್ಸ್ ಕೇಳುತ್ತಾರಂತೆ. ವಿಭಿನ್ನ ನಿರೂಪಣೆ ಹಾಗೂ ವಿನೋದದ ಮಾತುಗಳಿಂದ ನಟ ಸಿಹಿಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದ ಕಂತು ಸಾವಿರವಾಗಲಿ ಎಂಬುದು ಅಂಥವರ ಬಯಕೆ.
ಬೊಂಬಾಟ್ ಭೋಜನ ಭಾಗ-4
ಮೂರು ಭಾಗಗಳಲ್ಲಿ ಬೊಂಬಾಟ್ ಭೋಜನ ಯಶಸ್ವಿಯಾಗಿ ಮಾರಾಟವಾಗುತ್ತಿದ್ದು, ಇದುವರೆಗೆ 40 ಸಾವಿರಕ್ಕೂ ಹೆಚ್ಚಿನ ಪ್ರತಿಗಳು ಮಾರಾಟವಾಗಿವೆ. ಇದೀಗ ಭಾಗ-4 ಮಾರುಕಟ್ಟೆಯಲ್ಲಿ ಲಭ್ಯ.
ಹೋಳಿಗೆ ಹೊಳಪು, ಕವನ ಕಡುಬು, ರಮಿತ ರೊಟ್ಟಿ, ತರಾತುರಿ ತರಕಾರಿ, ಆಲೂ ಆಭರಣ, ಕ್ಯಾಪ್ಸಿಕಂ ಕನಕ, ಸಲಾಂ ಶೇಂಗಾ... ಹೀಗೆ ಪ್ರತಿಯೊಂದು ಆಹಾರಕ್ಕೂ ವಿಭಿನ್ನ ಹೆಸರನ್ನಿಡುವ ಮೂಲಕ ಆಕರ್ಷಕವಾಗಿ ಪುಸ್ತಕವನ್ನು ಹೆಣೆದಿದ್ದಾರೆ. 102 ಬಗೆ ಖಾದ್ಯಗಳ ಮಾಡುವ ವಿಧಾನವನ್ನು ವಿವರಿಸಿರುವ ಈ ಪುಸ್ತಕದ ಬೆಲೆ 200 ರೂಪಾಯಿ. ಮಾಹಿತಿಗೆ: www.bombattbhojana.com
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.