ಬೆಂಗಳೂರು: ನಗರದ `ಸ್ಫೂರ್ತಿಧಾಮ' ಹಾಗೂ `ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್' ಆಶ್ರಯದಲ್ಲಿ ಅಂಜನಾನಗರದ ಸ್ಫೂರ್ತಿಧಾಮದಲ್ಲಿ ಭಾನುವಾರ ನಡೆಯಲಿರುವ `ಅಂಬೇಡ್ಕರ್ ಹಬ್ಬ'ದಲ್ಲಿ ಸಾಧಕರಿಗೆ 2013ನೇ ಸಾಲಿನ `ಬೋಧಿವೃಕ್ಷ' ಮತ್ತು `ಬೋಧಿವರ್ಧನ ಪ್ರಶಸ್ತಿ' ಪ್ರದಾನ ಮಾಡಲಾಗುವುದು.
ಐದು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು `ಅಂಬೇಡ್ಕರ್ ಹಬ್ಬ'ವಾಗಿ ಆಚರಿಸಿಕೊಂಡು ಬರುತ್ತಿರುವ ಸ್ಫೂರ್ತಿಧಾಮ, ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸಿ ಗೌರವಿಸುವ ಸಲುವಾಗಿ ವರ್ಷಕ್ಕೆ ಒಬ್ಬರಿಗೆ `ಬೋಧಿವೃಕ್ಷ' ಮತ್ತು ಐವರಿಗೆ `ಬೋಧಿವರ್ಧನ ಪ್ರಶಸ್ತಿ' ನೀಡುತ್ತಿದೆ. `ಬೋಧಿವೃಕ್ಷ' ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ, `ಬೋಧಿವರ್ಧನ' ಪ್ರಶಸ್ತಿ 20 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ಈ ಬಾರಿಯ ಬೋಧಿವೃಕ್ಷ ಪ್ರಶಸ್ತಿಗೆ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಕೃತಿ `ಎದೆಗೆ ಬಿದ್ದ ಅಕ್ಷರ'ಆಯ್ಕೆಯಾಗಿದೆ.
ಬೋಧಿವರ್ಧನ ಪ್ರಶಸ್ತಿಗೆ ವೈ.ಜೆ. ರಾಜೇಂದ್ರ, ಕುಪ್ಪೆ ನಾಗರಾಜ್, ಸಿ.ಜೆ. ಶ್ರಿನಿವಾಸನ್, ಡಾ.ರಘುಪತಿ ಮತ್ತು ದಿ.ಎನ್.ಕಾಂತರಾಜು ಅವರು ಆಯ್ಕೆಯಾಗಿದ್ದಾರೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮತ್ತು ಸ್ಫೂರ್ತಿಧಾಮದ ಅಧ್ಯಕ್ಷ ಎಸ್. ಮರಿಸ್ವಾಮಿ, ಪತ್ರಕರ್ತ ಇಂದೂಧರ ಹೊನ್ನಾಪುರ, ಚಿಂತಕ ಡಾ. ಎಸ್. ತುಕಾರಾಮ್ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.