ಕೆರೂರ: ಸಮೀಪದ ಹಳಗೇರಿ, ಉಗಲವಾಟ ಗ್ರಾಮದ ಜಮೀನುಗಳಿಗೆ ನುಗ್ಗಿ ಹಲವು ರೈತರನ್ನು ಕಚ್ಚಿ ಗಾಯಗೊಳಿಸಿ, ವಿವಿಧ ಬೆಳೆಗಳನ್ನು ಹಾಳು ಮಾಡುತ್ತಿದ್ದ ಹುಚ್ಚು ಮಂಗಗಳನ್ನು ಸೆರೆ ಹಿಡಿಯುವಲ್ಲಿ ಪಳಗಿದವರ ಸಹಾಯ ದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಯಶಸ್ವಿಯಾಗಿದ್ದು, ಹಾವಳಿಗೆ ಬೇಸತ್ತಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
ಹಳಗೇರಿ ಬಳಿ ಇರುವ ನರೇನೂರ ಅವರ ಬಾಳೆತೋಟಕ್ಕೆ ದಾಳಿ ಇಟ್ಟ ಮಂಗಗಳನ್ನು, ಮೊದಲೇ ಪಂಜರ ಇಟ್ಟು ಹೊಂಚು ಹಾಕಿದ್ದ ನುರಿತ ಹಿಡಿತಗಾರ ಚೊಳಚಗುಡ್ಡದ ವೀರಣ್ಣ ಗಣಾಚಾರಿ, ವನಪಾಲಕ ಎಸ್.ಎಂ . ಕೊಳದೂರ, ಎಸ್.ಟಿ. ಬಾರಕೇರ, ಬೈಲಪ್ಪ, ರಾಮಕೃಷ್ಣ ಹಾಗೂ ಗ್ರಾಮಸ್ಥರು ಸಂಜೆಯೊಳಗಾಗಿ ನಾಲ್ಕು ಮಂಗಗಳನ್ನು ಸೆರೆ ಹಿಡಿದರು.
ಈ ಮಂಗಗಳ ಹಾವಳಿ ಸುತ್ತಲಿನ ಗ್ರಾಮಸ್ಥರಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿತ್ತು. ಅವುಗಳನ್ನು ಸೆರೆ ಹಿಡಿ ಯಲು ಕಳೆದ ಹದಿನೈದು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ, ನುರಿತ ಮಂಗ ಹಿಡಿಯುವ, ಗ್ರಾಮಸ್ಥರು ಸತತ ಪ್ರಯತ್ನ ನಡೆಸಿದ್ದರೂ ಈ ಕೋತಿಗಳ ಚೆಲ್ಲಾಟದಿಂದ ಮತ್ತು ಬಹುತೇಕ ಈ ಭಾಗದ ಜಮೀನುಗಳಲ್ಲಿ ಆಳೆತ್ತರದ ಬೆಳೆ ಇದ್ದುದರಿಂದ ಅದು ಸಾಧ್ಯವಾಗಿರಲಿಲ್ಲ.
ಮಂಗ ಕಚ್ಚಿ ಕಾಲಿಗಾದ ತೀವ್ರ ಗಾಯದಿಂದ ಉಗಲವಾಟದ ಹಳಗೇ ರಿಯ ಭೀಮಪ್ಪ ಬೆಳಕೊಪ್ಪದ, ಬಸವ ರಾಜ ಅರಗಂಜಿ ಇನ್ನೂ ಚೇತರಿಸಿ ಕೊಂಡಿಲ್ಲ ಎಂದು ತಿಳಿದು ಬಂದಿದೆ.
ಹುಚ್ಚುಮಂಗಗಳ ಉಪಟಳದಿಂದ ಬೇಸತ್ತಿದ್ದ ರೈತರು ಬಾಳೆ ತೋಟದಲ್ಲಿ ಸೆರೆ ಸಿಕ್ಕ ಮಂಗಗಳನ್ನು ನೋಡಲು ನೂರಾರು ಜನ ಮುಗಿಬಿದ್ದಿದ್ದರು. ನಂತರ ಅವುಗಳನ್ನು ಧಾರವಾಡಕ್ಕೆ ಸಾಗಿಸಲಾಯಿತೆಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.