ಬೆಂಗಳೂರು: ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಲು ಮಿತಿ ಹೇರಿರುವುದನ್ನು ಖಂಡಿಸಿ ಶಿವಾಜಿನಗರದ ಅಮಾನತ್ ಕೋ ಆಪರೇಟಿವ್ ಬ್ಯಾಂಕ್ ಮುಂದೆ ಗ್ರಾಹಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಪಡೆದ ಹಣವನ್ನು ಅಮಾನತ್ ಕೋ ಆಪರೇಟಿವ್ ಬ್ಯಾಂಕ್ ಹಿಂದಿರುಗಿಸಿರಲಿಲ್ಲ. ಈ ಕಾರಣಕ್ಕೆ ಆರ್ಬಿಐ, ಬ್ಯಾಂಕ್ ವಿರುದ್ಧ ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್ 35 (ಎ) ನಿಯಮ ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ ಬ್ಯಾಂಕ್ನ ಖಾತೆ ಹೊಂದಿರುವ ಗ್ರಾಹಕರಿಗೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಮಂಜೂರು ಮಾಡುವಂತಿಲ್ಲ.
`ಬ್ಯಾಂಕ್ನಲ್ಲಿ ಅಲ್ಪಸಂಖ್ಯಾತರೆ ಹೆಚ್ಚಾಗಿ ಠೇವಣಿ ಇಟ್ಟಿದ್ದಾರೆ. ಆದರೆ, ಬ್ಯಾಂಕ್ ಆಡಳಿತ ಮಂಡಳಿ ಮಾಡಿದ ತಪ್ಪಿನಿಂದ ನಮಗೆ ಅನ್ಯಾಯವಾಗುತ್ತಿದೆ. ಕಷ್ಟದ ಕಾಲಕ್ಕೆ ನೆರವಾಗಲೆಂದು ಹಣ ಕೂಡಿಟ್ಟಿರುತ್ತೇವೆ. ಆದರೆ, ದಿನಕ್ಕೆ ಕೇವಲ ಒಂದು ಸಾವಿರ ರೂಪಾಯಿಯನ್ನು ಮಾತ್ರ ಹಿಂಪಡೆಯಬಹುದು ಎಂದು ಮಿತಿ ಹೇರಿರುವುದು ಯಾವ ನ್ಯಾಯ. ಈ ಸಂಬಂಧ ಮೂರ್ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಪ್ರತಿಭಟನಾಕಾರ ನೂರ್ ಅಹಮ್ಮದ್ ದೂರಿದರು.