ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಸಾಧನೆಗೆ ಶ್ರೀಗಳ ಪ್ರಶಂಸೆ

Last Updated 15 ಮಾರ್ಚ್ 2011, 7:00 IST
ಅಕ್ಷರ ಗಾತ್ರ

ಗೋಕಾಕ: ಸಹಕಾರಿ ಸಂಘಟನೆಯ ಜೀವಾಳವೇ ವಿಶ್ವಾಸ. ಅಂಥ ವಿಶ್ವಾಸದ ಅಡಿಪಾಯದೊಂದಿಗೆ ಸಂಸ್ಥೆಯೊಂದು ಶತಮಾನೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಅದ್ಭುತ. ಆ ಸಾಧನೆಗೆ ಸದಸ್ಯರು ಮತ್ತು ಅವರ ಪ್ರತಿನಿಧಿಗಳು ನೀಡಿದ ಕೊಡುಗೆ ಅಪಾರ ಎಂದು ವಿಜಾಪುರ ಜ್ಞಾನ ಯೋಗಾಶ್ರಮದ  ಸಿದ್ಧೇಶ್ವರ ಸ್ವಾಮೀಜಿ ಪ್ರಶಂಸೆ ಮಾಡಿದರು.

ಸೋಮವಾರ ನಗರದ ಕೆ.ಎಲ್.ಇ. ಶಾಲಾ ಆವರಣದಲ್ಲಿ ಸಮಾರೋಪಗೊಂಡ ಮೂರು ದಿನಗಳ  ಗೋಕಾಕ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಸಹಕಾರಿ ತತ್ವದ ಮೂಲಕ ಸಂಸ್ಥೆಯೊಂದು ಸಾಧಿಸಿದ ಯಶಸ್ಸಿನಲ್ಲಿ ಸದಸ್ಯರು ಮತ್ತು ಠೇವುದಾರರ ಪಾಲಿಗಿಂತ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಅಸಲು-ಬಡ್ಡಿ ಮರುಪಾವತಿ ಮಾಡುವ ವ್ಯಕ್ತಿಯ ಪ್ರಾಮಾಣಿಕತೆಯ ಪಾಲೇ ದೊಡ್ಡದು ಎಂದರು.

ನೂರಕ್ಕೂ ಅಧಿಕ ವರ್ಷಗಳ ಸೇವೆಯ ಮೂಲಕ ಸದಸ್ಯರ ವಿಶ್ವಾಸವನ್ನು ಸಂಪಾದಿಸಿರುವ ಇಂಥ ಸಂಸ್ಥೆ ಇತರರಿಗೂ ಮಾದರಿ ಆಗಲಿ ಎಂದ ಶ್ರೀಗಳು, ಸಹಕಾರಿ ತತ್ವಗಳನ್ನು ಚಾಚೂ ತಪ್ಪದೇ ಪಾಲಿಸುವ ಸಂಸ್ಥೆ ನಷ್ಟವನ್ನು ಅನುಭವಿಸಲಾರದು ಎಂದು ಅಭಿಪ್ರಾಯ ಪಟ್ಟರು.ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ ಗೋಕಾಕ ಅರ್ಬನ್ ಬ್ಯಾಂಕ್ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿಸಿದರು. ನೇತೃತ್ವ ವಹಿಸಿದ್ದ ಘೋಡಗೇರಿಯ ಶ್ರೀ ಶಿವಾನಂದ ಮಠದ  ಮಲ್ಲಯ್ಯ ಸ್ವಾಮೀಜಿ,  ಎಲ್ಲ ಸಹಕಾರಿ ಸಂಸ್ಥೆಗಳು ಶತಮಾನೋತ್ಸವ ಆಚರಿಸಿ ಇತರರಿಗೆ ಮಾದರಿಯಾಗಲಿ ಎಂದು ಆಶಿಸಿದರು.

ಇದಕ್ಕೂ ಮೊದಲು ಬ್ಯಾಂಕ್‌ನ ಹಿರಿಯ ನಿರ್ದೇಶಕರಾದ ಸಿ.ಬಿ.ತಾರಳಿ, ಸಿ.ಸಿ.ಆಲತಗಿ, ಎಂ.ಡಿ. ಚುನಮರಿ, ಎಸ್.ಜಿ.ಸೊಲ್ಲಾಪೂರಮಠ, ಎಸ್.ಬಿ. ಅಂಕಲಿ ಮತ್ತು ಶಾಂತಕ್ಕಾ ಘೋಡಗೇರಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.ನಿವೃತ್ತ ಪ್ರಾಚಾರ್ಯ ಡಾ. ವಿ.ವಿ. ಬಾಗಲಕೋಟಿ ಅವರ ಆಂಗ್ಲ ಭಾಷಾ ಕೃತಿಯನ್ನು   ಸಿದ್ಧೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು. ಬ್ಯಾಂಕ್  ಉಪಾಧ್ಯಕ್ಷ ಡಿ.ಸಿ. ಬಿದರಿ, ನಿರ್ದೇಶಕರಾದ ಎಸ್.ಟಿ.ಹಾಗರಗಿ, ಜಯಾನಂದ (ರಾಜು) ಮುನವಳ್ಳಿ, ಬಸವರಾಜ ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾವತಿ ಮಗದುಮ್ ಅವರು ವಚನ ಹಾಡಿದರು. ಹಿರಿಯ ನಿರ್ದೇಶಕ ಸಿ.ಬಿ.ತಾರಳಿ ಸ್ವಾಗತಿಸಿದರು. ಇನ್ನೊಬ್ಬ ಹಿರಿಯ ನಿರ್ದೇಶಕ ಸುರೇಶ ಸೊಲ್ಲಾಪೂರಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬ್ಯಾಂಕ್ ಚೇರಮನ್ ಮಲ್ಲಿಕಾರ್ಜುನ ಚುನಮರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT