ಕಾರವಾರ: ಭಾರತೀಯ ಸ್ಟೇಟ್ ಬ್ಯಾಂಕ್ ಜತೆಗೆ ಅದರ ಸಹವರ್ತಿ ಬ್ಯಾಂಕುಗಳನ್ನು ವಿಲೀನಗೊಳಿಸುವ ಕ್ರಮ ವಿರೋಧಿಸಿ ವಿವಿಧ ಬ್ಯಾಂಕ್ ನೌಕರರು ಸೋಮವಾರ ನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ಎದುರು ಪ್ರತಿಭಟನೆ ನಡೆಸಿದರು.
‘ಜನ ವಿರೋಧಿ ಬ್ಯಾಂಕಿಂಗ್ ಸುಧಾರಣಾ ನೀತಿಯನ್ನು ಕೈಬಿಡಬೇಕು. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳ ವಿಲೀನ ಮಾಡಬಾರದು. ರಿಜರ್ವ್ ಬ್ಯಾಂಕ್ನ ಹೊಸ ಬ್ಯಾಂಕ್ ಪರವಾನಗಿ ನೀತಿಯು ಶ್ರೀಮಂತ ಕೈಗಾರಿಕೋದ್ಯಮಿ ಗಳ ಪರ ಹಾಗೂ ಜನಸಾಮಾನ್ಯರ ವಿರುದ್ಧವಾಗಿದ್ದು, ಈ ನೀತಿಯನ್ನು ಕೈಬಿಡಬೇಕು’ ಎಂದು ಪ್ರತಿಭಟನಾರರು ಆಗ್ರಹಿಸಿದರು.
‘ಸಹವರ್ತಿ ಬ್ಯಾಂಕುಗಳನ್ನು ಎಸ್ಬಿಐನಿಂದ ಪ್ರತ್ಯೇಕಿಸಿ ಸ್ವತಂತ್ರ ಬ್ಯಾಂಕುಗಳನ್ನಾಗಿ ಪರಿವರ್ತಿಸಿ. ಆ ಮೂಲಕ ಸಹವರ್ತಿ ಬ್ಯಾಂಕುಗಳು ಆಯಾ ಪ್ರಾದೇಶಿಕ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಅವಕಾಶ ಮಾಡಿಕೊಡಿ’ ಎಂದು ಒತ್ತಾಯಿಸಿದರು.
ಕಾರವಾರ ತಾಲ್ಲೂಕು ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯ ದರ್ಶಿ ವಾಸುದೇವ ಶೇಟ್ ಮಾತನಾಡಿ, ಸ್ಟೇಟ್ ಬ್ಯಾಂಕ್ ಜತೆಗೆ ಅದರ ಸಹವರ್ತಿ ಬ್ಯಾಂಕ್ಗಳನ್ನು ವಿಲೀನಗೊಳಿಸುವ ಕ್ರಮ ವಿರೋಧಿಸಿ ಇದೇ 25ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಇದರ ಪೂರ್ವಭಾವಿ ಯಾಗಿ ಕಾರವಾರ ತಾಲ್ಲೂಕು ಬ್ಯಾಂಕ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದರು.
ಬ್ಯಾಂಕ್ ನೌಕರರಾದ ಮನೋಹರ ವಿನಾಯಕ ನಾಯ್ಕ, ಗಜಾನನ ಬಾಂದೇಕರ, ವಿನೋದ ಬಾಂದೇಕರ, ರವಿಕಾಂತ ತಾಳೇಕರ, ಯಶವಂತ ನಾಯಕ, ಬೀನಾ, ರಂಜನಾ ಹಾಜರಿದ್ದರು.