ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟು-ಚೆಂಡು ಹಿಡಿದವರ ಹೀರೋಗಿರಿ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಚ್ಚು-ಲಾಂಗು ಹಿಡಿದು ಅಬ್ಬರಿಸಿದವರು, ಹೂವು ಹಿಡಿದು ಹೀರೋಯಿನ್ ಜೊತೆ ಸರಸವಾಡಿದವರು, ಹಾಡು ಹಾಡಿ ಕುಣಿದವರು ಇವರು. ಆದರೆ ಇಲ್ಲಿ ಹಾಗೆ ಏನೂ ಮಾಡಲಿಲ್ಲ. ಬದಲಿಗೆ ಬ್ಯಾಟು-ಚೆಂಡು ಹಿಡಿದು `ಹೀರೋಗಿರಿ~ ನಡೆಸಿದರು.

ಕ್ರಿಕೆಟಿಗರ ಗೆಟಪ್‌ನಲ್ಲಿ ಸಿನಿ ತಾರೆಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟಕ್ಕಿಳಿದರು. ಸೆಟ್‌ಗೆ ತಡವಾಗಿ ಬರುವ ಕೆಲವು ನಟರು ಕೂಡ ಡ್ರೆಸಿಂಗ್ ಕೋಣೆಗೆ ಸರಿಯಾದ ಸಮಯಕ್ಕೆ ಹಾಜರ್. ಆದರೆ ದುರಾದೃಷ್ಟ ನೋಡಿ; ಪ್ರೇಕ್ಷಕರು ಮಾತ್ರ ಬಂದಿದ್ದು ಕಡಿಮೆ. ಇನ್ನಷ್ಟು ನೋಡುಗರು ಬರಲೆಂದು ಪಂದ್ಯದ ಸಮಯವನ್ನು ಮುಂದೂಡಿದ್ದೂ ಆಯಿತು. ತಡವಾಗಿಯಾದರೂ ಅಂತೂ ಶುರುವಾಯಿತು ಆಟ. ಆಗಲೇ ಮಳೆಯ ಆರ್ಭಟ. ಅಲ್ಪವಿರಾಮ... ಮತ್ತೆ ಆಟ!

ಗಮನ ಅಂಗಳದ ಕಡೆಗೆ ನೆಡುವ ಸಾಹಸ ಮಾಡಿದರೂ; ಆಗಾಗ ಚಿತ್ತ ಚಂಚಲವಾಗಿ ತಿರುಗುತಿತ್ತು ಗಣ್ಯರ ಗ್ಯಾಲರಿಗಳ ಕಡೆಗೆ. ಅಲ್ಲಿದ್ದ ಬೆಡಗಿನ ನಟಿಯರ ನಗೆ-ನಲಿವಿನ ಕಡೆಗೆ ಭಾರಿ ಸೆಳೆತ. ಹೀರೋಗಳು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚು ತ್ತಿದ್ದರೂ, ಪ್ರೇಕ್ಷಕರ ಸನಿಹದಲ್ಲಿದ್ದ ನಟಿಮಣಿಗಳ ಆಕರ್ಷಣೆಯೇ ಹೆಚ್ಚು. ಅಲ್ಲಿ ನೋಡು `ನಮ್ಮ ರಮ್ಯಾ...~ ಎಂದು ಒಬ್ಬ ಎದ್ದು ನಿಂತರೆ, ಇನ್ನೊಬ್ಬನಿಂದ ಮತ್ತೊಂದು ನಾಯಕಿಯ ಹೆಸರು...! ಹೀಗೆ ಕ್ರಿಕೆಟ್ ಜೊತೆ ಜೊತೆಯಲ್ಲಿಯೇ ನೆಚ್ಚಿನ ನಟಿಯರನ್ನು ಕಂಡ ಪ್ರೇಕ್ಷಕರ ನಡುವೆ ಹರಿಯಿತು ಹರ್ಷದ ಹೊಳೆ.

ಜನಪದ ಕಲಾವಿದರ ವಾದ್ಯಗಳ ಅಬ್ಬರದೊಂದಿಗೆ ಮೊದಲ ಸೆಲೆಬ್ರಿಟಿ ಕ್ರಿಕೆಟ್ ಲೀಗ್(ಸಿಸಿಎಲ್)ನ ಮೊದಲ ಸೀನ್. ಆನಂತರ `ಸಲ್ಲುಮಿಯಾ~ ಎಂಟ್ರಿ ಕೊಟ್ಟರು. ಅವರೊಂದಿಗೆ ಕನ್ನಡದ ಹಿರಿಯ ನಟರಾದ ಅಂಬರೀಷ್ ಹಾಗೂ ರವಿಚಂದ್ರನ್ ಕೂಡ ಹಾಜರು. ಶಾಸ್ತ್ರಕ್ಕೆ ಎನ್ನುವಂತೆ ನಡೆಯಿತು ಉದ್ಘಾಟನಾ ಸಮಾರಂಭ. ಭಾಷಣ ಎಂದರೆ ಅದು ಸಲ್ಮಾನ್ ಖಾನ್ ಆಡಿದ ನಾಲ್ಕು ಮಾತು ಮಾತ್ರ.

ವಿಚಿತ್ರವೆಂದರೆ ಸೂರ್ಯ ದೇವನಿಗೆ ಕೂಡ ಸಿನಿಮಾ ತಾರೆಗಳನ್ನು ನೋಡುವ ಆಸಕ್ತಿ ಎನ್ನುವಂಥ ಸ್ಥಿತಿ. ಒಂದೆಡೆ ಮೋಡ ಮುಸುಕಿ ಮಳೆ ಸುರಿಯುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಪ್ರಖರವಾದ ಬಿಸಿಲು...!.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT