ಶ್ರೀನಗರ (ಪಿಟಿಐ): ಒಲಿಂಪಿಯನ್ ಪಿ.ಕಶ್ಯಪ್ ಹಾಗೂ ಸಯ್ಯಾಲಿ ಗೋಖಲೆ ಅವರು ಬುಧವಾರ ಇಲ್ಲಿ ಕೊನೆಗೊಂಡ 77ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಗಿದ್ದಾರೆ.
ಪುರುಷರ ವಿಭಾಗದ ಫೈನಲ್ನಲ್ಲಿ ಕಷ್ಯಪ್ 21-18, 21-17ರಲ್ಲಿ ಅಜಯ್ ಜಯರಾಮ್ ಎದುರು ಗೆದ್ದರು.
`ಈ ಪ್ರಶಸ್ತಿ ನನಗೆ ಇದೇ ಮೊದಲ ಬಾರಿ ಒಲಿಯುತ್ತಿದೆ. ಇಷ್ಟು ದಿನ ಹೆಗಲ ಮೇಲಿದ್ದ ಭಾರ ಕಳಚಿ ಬಿದ್ದಿದೆ. ಅದಕ್ಕಾಗಿ ಇಷ್ಟು ದಿನ ಕಾಯಬೇಕಾಯಿತು. ರಾಷ್ಟ್ರೀಯ ಚಾಂಪಿಯನ್ ಆಗಬೇಕೆಂಬುದು ನನ್ನ ಕನಸಾಗಿತ್ತು~ ಎಂದು ಕಶ್ಯಪ್ ಹೇಳಿದರು.
ಆದರೆ ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು ಆಘಾತ ಅನುಭವಿಸಿದರು. ಅವರು ಫೈನಲ್ನಲ್ಲಿ 15-21, 21-15, 15-21ರಲ್ಲಿ ಸಯ್ಯಾಲಿ ಎದುರು ಸೋಲು ಕಂಡರು. `ಮತ್ತೊಮ್ಮೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದು ಖುಷಿ ನೀಡಿದೆ. ನಾನು 2008ರಲ್ಲಿ ಪ್ರಶಸ್ತಿ ಗೆದ್ದಿದ್ದೆ. ಆ ಬಳಿಕ ಸನಿಹ ಬಂದು ಎಡವುತ್ತಿದ್ದೆ. ಈ ಬಾರಿ ಅಂತಹ ತಪ್ಪು ಎಸಗಲಿಲ್ಲ. ಆಕ್ರಮಣಕಾರಿ ಆಟವಾಡುವುದು ನನ್ನ ಗುರಿಯಾಗಿತ್ತು~ ಎಂದು ಸಯ್ಯಾಲಿ ನುಡಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಪರ್ಣಾ ಬಾಲನ್ ಹಾಗೂ ಅರುಣ್ ವಿಷ್ಣು 21-13, 18-21, 21-15ರಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ತರುಣ್ ಕೋನಾ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಜಯಿಸಿದರು.
ಮಹಿಳೆಯರ ಡಬಲ್ಸ್ನಲ್ಲಿ ಅಪರ್ಣಾ ಬಾಲನ್ ಹಾಗೂ ಸಿಕ್ಕಿ ರೆಡ್ಡಿ 21-11, 21-13ರಲ್ಲಿ ಜಿ.ಎಂ.ನಿಶ್ಚಿತಾ ಹಾಗೂ ವರ್ಷಾ ಬೆಳವಾಡಿ ಎದುರು ಗೆದ್ದು ಚಾಂಪಿಯನ್ ಆದರು.