ಬೆಂಗಳೂರು: ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಪಿಎಸ್ಪಿಬಿ) ಹಾಗೂ ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಐಎಫ್ಸಿಐ 76ನೇ ಅಂತರ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ನಲ್ಲಿ ಪೈಪೋಟಿ ನಡೆಸದ್ದಾರೆ.
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಿಎಸ್ಪಿಬಿ 3-0ರಲ್ಲಿ ಮಹಾರಾಷ್ಟ್ರ ತಂಡವನ್ನು ಮಣಿಸಿತು.
ವಿಜಯಿ ತಂಡದ ಗುರುಸಾಯಿ ದತ್ 21-10, 21-7ರಲ್ಲಿ ಇಶನ್ ನೆಕ್ವಿ ಮೇಲೂ, ಬಿ. ಸಾಯಿ ಪ್ರಣೀತ್ 21-19, 21-12ರಲ್ಲಿ ಶುಭಾಂಕರ್ ದೇ ವಿರುದ್ಧವೂ ಗೆದ್ದರೆ, ವಿ. ದಿಜು- ಅರುಣ್ ವಿಷ್ಣು ಜೋಡಿ 21-3, 21-10ರಲ್ಲಿ ಸಮೀರ್ ಭಾಗವತ್-ವರುಣ್ ಕನ್ವಾಕರ್ ಎದುರು ಗೆಲುವು ಪಡೆಯಿತು.
ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಏರ್ ಇಂಡಿಯಾ 3-0ರಲ್ಲಿ ಅಸ್ಸಾಂ ತಂಡವನ್ನು ಸೋಲಿಸಿ ಪ್ರಶಸ್ತಿ ಸನಿಹ ಹೆಜ್ಜೆ ಹಾಕಿದೆ.
ಮುಗ್ಗರಿಸಿದ ಕರ್ನಾಟಕ: ಇದಕ್ಕೂ ಮುನ್ನ ನಡೆದ ರೋಚಕ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಆತಿಥೇಯ ಕರ್ನಾಟಕ ತಂಡ ಸೋಲು ಕಂಡಿತು. ರಾಜ್ಯ ತಂಡವನ್ನು 3-2ರಲ್ಲಿ ಏರ್ ಇಂಡಿಯಾ ಮಣಿಸಿತು.
ಮೊದಲ ಪಂದ್ಯದಲ್ಲಿ ಕರ್ನಾಟಕದ ಆದಿತ್ಯ ಪ್ರಕಾಶ್ 21-9, 21-16ರಲ್ಲಿ ಏರ್ ಇಂಡಿಯಾದ ಗೋಪಿರಾಜು ಅವರನ್ನು ಮಣಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಎರಡನೇ ಪಂದ್ಯದಲ್ಲಿ ಆನಂದ್ ಪವಾರ್ 21-17, 21-8ರಲ್ಲಿ ರಾಜ್ಯದ ಅನೂಪ್ ಶ್ರೀಧರ್ ಎದುರು ಗೆಲುವು ಸಾಧಿಸಿ 1-1ರಲ್ಲಿ ಸಮಬಲ ಸಾಧಿಸಿದರು.
ಪುರುಷರ ವಿಭಾಗದ ಡಬಲ್ಸ್ನಲ್ಲಿ ಆತಿಥೇಯ ರಾಜ್ಯದ ಡಿ. ಗುರು ಪ್ರಸಾದ್-ಆದರ್ಶ ಕುಮಾರ್ ಜೋಡಿ 21-19, 16-21, 21-15ರಲ್ಲಿ ಜಿಷ್ಣು ಸೈನಲ್-ಮನು ಅತ್ರಿ ಜೋಡಿಯನ್ನು ಮಣಿಸಿ 2-1ಕ್ಕೆ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.
ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಪ್ರತುಲ್ ಜೋಶಿ 21-13, 21-16ರಲ್ಲಿ ಕರ್ನಾಟಕದ ರೋಹನ್ ಕ್ಯಾಸ್ಟಲಿನೊ ಅವರನ್ನು ಮಣಿಸಿ ಮತ್ತೆ ಸಮಬಲ ಸಾಧಿಸಿದರು.
ನಿರ್ಣಾಯಕ ಐದನೇ ಪಂದ್ಯದಲ್ಲಿ ಅಕ್ಷಯ್ ದೇವಳ್ಕರ್ ಹಾಗೂ ಆನಂದ್ ಪವಾರ್ ಜೋಡಿ 22-20, 19-21, 21-18ರಲ್ಲಿ ಕರ್ನಾಟಕದ ಅನೂಪ್ ಶ್ರೀಧರ್-ಆದಿತ್ಯ ಪ್ರಕಾಶ್ ಜೋಡಿ ಯನ್ನು ಮಣಿಸಿತು.