ಮಾಗಡಿ: ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸಿ, ಚಿನ್ನದ ಪದಕ ಗಳಿಸುವತ್ತ ಗಮನಹರಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ನುಡಿದರು.
ಮಹಾಶಿವರಾತ್ರಿ ಅಂಗವಾಗಿ ಸೋಮವಾರ ತಡರಾತ್ರಿ ಎಚ್.ಜಿ.ಚನ್ನಪ್ಪ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಲಬ್ ವತಿಯಿಂದ ನಡೆದ ವಿಭಾಗೀಯ ಮಟ್ಟದ ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಯುವಜನತೆ ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಯಾವುದಾದರೂ ಒಂದು ಕ್ರೀಡೆಯಲ್ಲಿ ಪ್ರಾವಿಣ್ಯತೆ ಗಳಿಸಿಕೊಳ್ಳಬೇಕಿದೆ. ಕೇವಲ ಕ್ರಿಕೆಟ್ ಪಂದ್ಯಾವಳಿಗೆ ಸೀಮಿತರಾಗದೆ. ದೇಶಿಯ ಕ್ರೀಡೆಗಳತ್ತ ಗಮನಸಹರಿಸಿ, ಆರೋಗ್ಯದ ಜೊತೆಗೆ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಸಿ.ಬಾಲಕೃಷ್ಣ ಪಟ್ಟಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಭರವಸೆ ನೀಡಿದರು.
ಪುರಸಭೆಯ ಅಧ್ಯಕ್ಷ ಎಚ್.ಜೆ.ಪುರುಷೋತ್ತಮ್, ಬಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಅಶೋಕ್ ಮಾತನಾಡಿದರು.
ಜಿ.ಪಂ.ಸದಸ್ಯರಾದ ಧನಂಜಯ, ಮುದ್ದರಾಜ್, ವಿಜಯಕುಮಾರ್, ಹಿರಿಯ ಕ್ರೀಡಾಪಟು ಎನ್.ಗಂಗಯ್ಯ, ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ಭೂಬ್ಯಾಂಕ್ ನಿರ್ದೇಶಕ ಸೀಬೇಗೌಡ, ಕಾರ್ಯದರ್ಶಿ ಕಿರಣ್ ಕುಮಾರ್ ಇತರರು ಭಾಗವಹಿಸಿದ್ದರು.