ಮುಂಬೈ (ಪಿಟಿಐ): ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ರಾಮು ಸ್ಮಾರಕ 28ನೇ ಅಖಿಲ ಭಾರತ ಬ್ಯಾಸ್ಕೆಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದರು.
ಜಿಮ್ಖಾನಾ ಕೋರ್ಟ್ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ 76-71 ರಲ್ಲಿ ಕರ್ನಾಟಕ ವಿರುದ್ಧ ಜಯ ಸಾಧಿಸಿ ಶುಭಾರಂಭ ಮಾಡಿತು. 25 ಪಾಯಿಂಟ್ ಗಳಿಸಿದ ಅಮೃತ್ಪಾಲ್ ಸಿಂಗ್ ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕರ್ನಾಟಕದ ಪರ ಅರವಿಂದ್ (24), ಸಂಜಯ್ ರಾಜ್ (12) ಮತ್ತು ಶ್ರೀನಿವಾಸ್ ನಾಯ್ಕ (13) ಉತ್ತಮ ಪ್ರದರ್ಶನ ನೀಡಿದರು. ಎರಡನೇ ಅವಧಿಯಲ್ಲಿ ಕರ್ನಾಟಕ 46-43 ರಲ್ಲಿ ಮೇಲುಗೈ ಪಡೆಯಿತು. ಆದರೆ ಮೊದಲ ಅವಧಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ಕಾರಣ ಸೋಲು ಎದುರಾಯಿತು.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ 72-65 ರಲ್ಲಿ ಇಂಡಿನ್ ಏರ್ಫೋರ್ಸ್ ತಂಡವನ್ನು ಮಣಿಸಿತು. ಎರಡನೇ ಕ್ವಾರ್ಟರ್ನ ಕೊನೆಗೆ ಉಭಯ ತಂಡಗಳು 32-32 ರಲ್ಲಿ ಸಮಬಲ ಸಾಧಿಸಿದ್ದವು. ಆ ಬಳಿಕ ಓವರ್ಸೀಸ್ ಬ್ಯಾಂಕ್ ಮೇಲುಗೈ ಪಡೆಯಿತು. ಕೆ. ಹರೀಶ್ (19), ಆರ್. ವಿನೀತ್ (12) ಮತ್ತು ಮಿಹಿರ್ ಪಾಂಡೆ (12) ಅವರು ವಿಜಯಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು.