ವಿಟ್ಲ: ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ಪ್ರಥಮ ಬ್ರಹ್ಮ ಕಲಶೋತ್ಸವದಲ್ಲಿ ಹಿಂದೂಗಳ ಜತೆ ಮುಸ್ಲಿಮರು, ಕ್ರೈಸ್ತರು, ಜೈನರು ಕೈಜೋಡಿಸಿ ಧರ್ಮ ಸಾಮರಸ್ಯ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಕ್ಯಾಥೊಲಿಕ್ ಸಂಘಟನೆಯವರು, ಮುಸ್ಲಿಮರು ದೇಗುಲಕ್ಕೆ ಹೊರೆ ಕಾಣಿಕೆ ನೀಡಿದರು. 13 ದಿನಗಳ ಕಾಲ ನಡೆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದರು. ನಿತ್ಯ ಸಹಸ್ರಾರು ಜನರಿಗೆ ಅನ್ನಸಂತರ್ಪಣೆ ನಡೆಯಿತು. ವಿವಿಧ ಧರ್ಮಕ್ಷೇತ್ರಗಳು ಹಾಗೂ ಸಂಘ, ಸಂಸ್ಥೆಗಳ ಆರು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.
ಸಮಾರೋಪದಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸು ಅಧ್ಯಕ್ಷತೆ ವಹಿಸಿದರು.
ಆಕರ ಗ್ರಂಥ `ರುದ್ರಾಕ್ಷಿ'ಗೆ ಹೆಸರು ಸೂಚಿಸಿದ ಶ್ರೀದೇವಿ ಭಟ್, `ಪಂಚಾಕ್ಷರಿ' ಸ್ಮರಣ ಸಂಚಿಕೆಗೆ ಹೆಸರು ಸೂಚಿಸಿದ ಸವಿತಾ ಭಟ್ ಅಡ್ವಯಿ, ಅನ್ನದಾನಿ ಭಾರತಿ ಜನಾರ್ದನ ಪೈ ಪರವಾಗಿ ಮಕ್ಕಳಾದ ಸುಬ್ರಾಯ ಪೈ ಮತ್ತು ರಾಧಾಕೃಷ್ಣ ಪೈ, ಪಿದಮಲೆ ಗೋವಿಂದ ಭಟ್, ಮುಳಿಯ ಗೋಪಾಲಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು.
ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ವಿ.ಹಿಂ.ಪ ಮುಖಂಡ ಎಂ. ಬಿ. ಪುರಾಣಿಕ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಲ್. ಎನ್. ಕೂಡೂರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್ ಉಪಸ್ಥಿತರಿದ್ದರು.