ಬೆಂಗಳೂರು: ‘ಬ್ರಿಟಿಷರು ನಮ್ಮ ದೇಶಕ್ಕೆ ಬರುವವರೆಗೂ ನಮಗೆ ಇತಿಹಾಸ ಪ್ರಜ್ಞೆಯೆಂಬುದು ಇರಲಿಲ್ಲ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಹಾಗೂ ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಅವರು ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಚರಿತ್ರೆ ವಿಭಾಗವು ಹೊರತಂದ ಎಂಟು ಚರಿತ್ರೆ ಸಂಪುಟಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತೀಯ ಇತಿಹಾಸ ಸಂಶೋಧನಾ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಇತಿಹಾಸಕಾರ ಡಾ.ಎಸ್.ಶೆಟ್ಟರ್, ಕಂಬಾರ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ, ‘ಇತಿಹಾಸ ಪ್ರಜ್ಞೆ ಇರಲಿಲ್ಲ ಎಂಬುದರ ಬದಲು ಅದನ್ನು ನೋಡುವ ರೀತಿ, ಪದ್ಧತಿ ಬೇರೆ ಇತ್ತು ಎಂದರೆ ಸರಿಯಾಗುತ್ತದೆ ಎಂದರು.
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಿ.ವೆಂಕಟಸುಬ್ಬಯ್ಯ, ಕುಲಪತಿ ಎ.ಮುರಿಗೆಪ್ಪ, ಕುವೆಂಪು ವಿ.ವಿ. ಚರಿತ್ರೆ ವಿಭಾಗದ ಮುಖ್ಯಸ್ಥ ರಾಜಾರಾಮ ಹೆಗಡೆ, ಸಂಪುಟಗಳ ಪ್ರಧಾನ ಸಂಪಾದಕ ವಿಜಯ್ ಪೂಣಚ್ಚ ತಂಬಂಡ, ಕನ್ನಡ ವಿ.ವಿ.ಚರಿತ್ರೆ ವಿಭಾಗದ ಮುಖ್ಯಸ್ಥ ಎನ್.ಚಿನ್ನಸ್ವಾಮಿ ಸೋಸಲೆ ವೇದಿಕೆಯಲ್ಲಿದ್ದರು.