ಬಂಗಾರಪೇಟೆ: ಪಟ್ಟಣದ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಕೊಚ್ಚುವೇಲಿಗೆ ಹೊರಟಿದ್ದ ಎಕ್ಸ್ಪ್ರೆಸ್ ರೈಲಿನ ಎಸ್-14ರ ಬೋಗಿಯ ಚಕ್ರದ ಬ್ರೇಕ್ ಜಾಮ್ ಆಗಿದ್ದರಿಂದ ಒಂದು ಗಂಟೆಗೂ ಹೆಚ್ಚು ಸಮಯ ರೈಲು ನಿಲ್ಲಬೇಕಾಯಿತು.
ವಿವರಣೆ: ರೈಲು ಪಟ್ಟಣದ ನಿಲ್ದಾಣ ಸಮೀಪಿಸುತ್ತಿದ್ದಂತೆ ರೈಲಿನ ಎಸ್-14ರ ಬೋಗಿಯಿಂದ ಭಾರಿ ಶಬ್ದ ಕೇಳಿಸಿದೆ. ಇದರಿಂದ ಗಾಬರಿಗೊಂಡ ರೈಲು ಸಿಬ್ಬಂದಿ ಪರಿಶೀಲಿಸಿದಾಗ ಚಕ್ರದ ಬ್ರೇಕ್ ಜಾಮ್ ಆಗಿ ಗಾಲಿ ಸವೆತ ಉಂಟಾಗಿರುವುದು ಕಂಡುಬಂದಿದೆ. ಕೂಡಲೇ ಎಚ್ಚತ್ತುಕೊಂಡ ರೈಲು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಬೋಗಿಯನ್ನು ಬೇರ್ಪಡಿಸಿದ್ದಾರೆ. ಆ ಬೋಗಿಯಲ್ಲಿದ್ದ 72 ಮಂದಿ ಪ್ರಯಾಣಿಕರನ್ನು ಇತರ ಬೋಗಿಗಳಿಗೆ ಸ್ಥಳಾಂತರಿಸಿ, ಕಳುಹಿಸಲಾಗಿದೆ.
ತಡ: ಘಟನೆ ಹಿನ್ನೆಲೆಯಲ್ಲಿ ಕೊಚುವೇಲಿಗೆ ತೆರಳಬೇಕಿದ್ದ ರೈಲು ಒಂದು ಘಂಟೆ ತಡವಾಗಿ ಚಲಿಸಿದೆ ಎಂದು ಪಟ್ಟಣದ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ರೈಲಿನಲ್ಲಿ ಉಂಟಾದ ಭಾರಿ ಶಬ್ದದಿಂದ ಕೆಲ ಪ್ರಯಾಣಿಕರು ಗಾಬರಿಗೊಂಡರು. ಅಲ್ಲದೆ ದೂರದ ಪಟ್ಟಣಗಳಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಯಿತು ಎಂದು ತಿಳಿದುಬಂದಿದೆ.