ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂಫಿಲಂ ವಿವಾದ: ವಿಚಾರಣೆ ಆರಂಭ

Last Updated 29 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬ್ಲೂ ಫಿಲಂ~ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾದ ವಿಧಾನಸಭೆಯ ವಿಚಾರಣಾ ಸಮಿತಿ ತನ್ನ ಕೆಲಸ ಆರಂಭಿಸಿದ್ದು, ಸಮಿತಿ ಸದಸ್ಯರು ಅಶ್ಲೀಲ ಚಿತ್ರದ ತುಣುಕುಗಳನ್ನು ಬುಧವಾರ ದೊಡ್ಡ ಪರದೆಯ ಮೇಲೆ ವೀಕ್ಷಿಸಿದರು.

ಶ್ರೀಶೈಲಪ್ಪ ಬಿದರೂರ ನೇತೃತ್ವದ ಸಮಿತಿಯ ಸಭೆಯಲ್ಲಿ ಬಿಜೆಪಿಯ ಮೂವರು ಸದಸ್ಯರು ಮಾತ್ರ ಭಾಗವಹಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗೈರುಹಾಜರಾಗಿದ್ದರು.

ಶ್ರೀಶೈಲಪ್ಪ ಅವರಲ್ಲದೆ, ಬಿಜೆಪಿಯ ಎಸ್.ಆರ್. ವಿಶ್ವನಾಥ್, ಬಿ.ಸುರೇಶಗೌಡ ಮತ್ತು ನೆಹರು ಓಲೇಕಾರ ಅವರು ಅಶ್ಲೀಲ ದೃಶ್ಯಾವಳಿಗಳನ್ನು ವೀಕ್ಷಿಸಿದರು. ಇವರ ಜತೆಗೆ ವಿಧಾನಸಭೆ ಅಧಿಕಾರಿಗಳು ಕೂಡ ಹಾಜರಿದ್ದರು.

ವಿಧಾನಸಭೆಯ ಸಿ.ಸಿ. ಟಿವಿಗಳಲ್ಲಿ ದಾಖಲಾಗಿರುವ ಹಾಗೂ ಟಿ.ವಿ. ವಾಹಿನಿಗಳು ಪ್ರಸಾರ ಮಾಡಿದ್ದ ದೃಶ್ಯಾವಳಿಗಳನ್ನು ಇವರೆಲ್ಲರೂ ವೀಕ್ಷಿಸಿದರು. ಸಿ.ಸಿ.ಟಿವಿಯಲ್ಲಿನ ದೃಶ್ಯಾವಳಿಗಳನ್ನು ಮೊದಲು ವೀಕ್ಷಿಸಿದ್ದು, ಅದರಲ್ಲಿ ಆಗ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರು ಮೊಬೈಲ್‌ನಲ್ಲಿದ್ದ ಅಶ್ಲೀಲ ಚಿತ್ರ ನೋಡುತ್ತಿರುವ ದೃಶ್ಯ ದಾಖಲಾಗಿದ್ದು, ಅದು ನಾಲ್ಕೈದು ಸೆಕೆಂಡ್‌ಗಳ ಅವಧಿಯದ್ದಾಗಿದೆ ಎನ್ನಲಾಗಿದೆ.

ಇದಲ್ಲದೆ, ಸವದಿ ಪಕ್ಕ ಕುಳಿತಿದ್ದ ಸಿ.ಸಿ.ಪಾಟೀಲ ಕೂಡ ಒಮ್ಮೆ ಪಕ್ಕಕ್ಕೆ ಇಣುಕಿದ್ದು, ತಕ್ಷಣ ಅದನ್ನು ಬಂದ್ ಮಾಡುವಂತೆ ಸೂಚಿಸಿ, ಅವರು ಹೊರ ನಡೆಯುವ ದೃಶ್ಯವೂ ದಾಖಲಾಗಿದೆ. ಅಶ್ಲೀಲ ಚಿತ್ರ ಇದ್ದ ಮೊಬೈಲ್ ಕೊಟ್ಟಿದ್ದ ಕೃಷ್ಣ ಪಾಲೆಮಾರ್ ಅವರು ಎಲ್ಲಿಯೂ ಈ ದೃಶ್ಯಗಳಲ್ಲಿ ಕಾಣುವುದಿಲ್ಲ ಎಂದು ಗೊತ್ತಾಗಿದೆ.

ಇದರ ನಂತರ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾದ ದೃಶ್ಯಾವಳಿಗಳ ಮೇಲೂ ಕಣ್ಣಾಡಿಸಿದ್ದಾರೆ. ಮೊಬೈಲ್‌ನಲ್ಲಿ ಕೆಲವು ಸೆಕೆಂಡ್‌ಗಳ ಮಟ್ಟಿಗೆ ಕಂಡ ದೃಶ್ಯಾವಳಿಗಳನ್ನು ಟಿ.ವಿ ವಾಹಿನಿಗಳು ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಿ ವಿವರವಾಗಿ ತೋರಿಸಿವೆ ಎನ್ನಲಾಗಿದ್ದು, ಆ ಬಗ್ಗೆಯೂ ಸಮಿತಿ ವಿವರಣೆ ಪಡೆದಿದೆ.

ಕನ್ನಡದ ಎರಡು ಖಾಸಗಿ ಟಿವಿ ವಾಹಿನಿಗಳ ಪೈಕಿ ಒಂದು ವಾಹಿನಿಯ ಪ್ರತಿನಿಧಿ ಬುಧವಾರ ಸಮಿತಿ ಮುಂದೆ ಹಾಜರಾಗಿದ್ದರು. ಅವರಿಗೆ ಐದು ಪ್ರಶ್ನೆಗಳನ್ನು ಕೇಳಲಾಗಿದೆ.

ಅವುಗಳೆಂದರೆ:
1. ತಮ್ಮ ಸಂಸ್ಥೆಯ ಪ್ರತಿನಿಧಿಗಳು ಯಾವ ಉದ್ದೇಶಕ್ಕಾಗಿ ವಿಧಾನಸಭೆಯ ಸಭಾಂಗಣಕ್ಕೆ ಬಂದಿದ್ದರು?

2. ಮೂಲ ಉದ್ದೇಶ ಮರೆತು ಅಸಭ್ಯ/ಅನವಶ್ಯಕ ದೃಶ್ಯಗಳನ್ನು ಸೆರೆ ಹಿಡಿದದ್ದು ಸರಿಯೇ? ಇದರ ಹಿಂದಿನ ಉದ್ದೇಶ ಏನು?

3. ಅಸಭ್ಯ ದೃಶ್ಯಗಳನ್ನು ಸೆರೆ ಹಿಡಿದಿದ್ದಲ್ಲದೆ, ಅವುಗಳನ್ನು ಸಭಾಧ್ಯಕ್ಷರ ಅನುಮತಿ ಇಲ್ಲದೆ ಇಡೀ ದಿನ ಮಾಧ್ಯಮಗಳಲ್ಲಿ ಬಿತ್ತರಿಸಿದ್ದು ನ್ಯಾಯಸಮ್ಮತವೇ?

4. ಇಂತಹ ದೃಶ್ಯಗಳನ್ನು ಸೆರೆಹಿಡಿದು ಪ್ರಸಾರ ಮಾಡಿದರೆ, ಕರ್ನಾಟಕ ವಿಧಾನಸಭೆಯ ಪತ್ರಿಕಾ ಗ್ಯಾಲರಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ನಿಯಮ 16, 17 ಮತ್ತು 20- ಇವುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂಬುದು ತಮಗೆ ತಿಳಿದಿಲ್ಲವೇ?

5. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಸಾರ್ವಜನಿಕ ವ್ಯವಸ್ಥೆ ಮತ್ತು ಸಭ್ಯತೆಯ ದೃಷ್ಟಿಯಿಂದ ಇಂತಹ ದೃಶ್ಯಾವಳಿಗಳನ್ನು ಚಿತ್ರೀಕರಿಸಿರುವುದು ಮತ್ತು ಅವುಗಳನ್ನು ವೈಭವೀಕರಿಸಿ ಪ್ರದರ್ಶಿಸಿರುವುದು ಸಮಂಜಸವೇ?

ಉತ್ತರಗಳ ಪರಿಶೀಲನೆ: ಗುರುವಾರವೂ ಸಮಿತಿ ಸಭೆ ಸೇರಲಿದ್ದು, ಮೂವರೂ ಶಾಸಕರು ಕೊಟ್ಟಿರುವ ಉತ್ತರಗಳನ್ನು ಪರಿಶೀಲನೆ ನಡೆಸಲಿದೆ. ಅದರ ನಂತರ ಈ ಶಾಸಕರಿಗೆ ನೋಟಿಸ್ ಕೊಟ್ಟು ಸಮಿತಿ ಮುಂದೆ ಹಾಜರಾಗಲು ಸೂಚಿಸಲಾಗುವುದು ಎಂದು ಶ್ರೀಶೈಲಪ್ಪ ಸುದ್ದಿಗಾರರಿಗೆ ತಿಳಿಸಿದರು.

ನಿಗದಿಯಂತೆ ಮಾ.13ರೊಳಗೆ ವರದಿ ನೀಡಲಾಗುವುದು. ಅಗತ್ಯ ಬಿದ್ದರೆ ಒಂದೆರಡು ದಿನ ಮುಂದಕ್ಕೆ ಹೋಗಬಹುದು. ಒಟ್ಟಿನಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ವರದಿ ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT