ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೇಡ್ ಕಂಪೆನಿಗೆ ಬಾಯ್ ಹೇಳಿ

Last Updated 18 ಜನವರಿ 2013, 19:59 IST
ಅಕ್ಷರ ಗಾತ್ರ

ಗಂಡ, ಮನೆ, ಮಕ್ಕಳು ಎಂದು ಮನೆವಾರ್ತೆಯಲ್ಲಿ ಮಾತ್ರ ತೊಡಗಿಕೊಂಡ ಮಹಿಳೆಯನ್ನು ಹಿಂದೆಲ್ಲಾ `ಹೌಸ್ ವೈಫ್' ಎಂದು ಕರೆಯಲಾಗುತ್ತಿತ್ತು. ಈಗ ಅವರನ್ನು ಗೌರವಯುತವಾಗಿ `ಹೋಮ್ ಮೇಕರ್' ಎನ್ನಲಾಗುತ್ತದೆ. ಹೆಸರು ಬದಲಾದರೇನು, ಅವರ ಪರಿಸ್ಥಿತಿಗಳು ಮಾತ್ರ ಹಾಗೆಯೇ ಇವೆ. 

ನಮ್ಮಲ್ಲಿ ಬಹಳಷ್ಟು ಮಹಿಳೆಯರು ಆರ್ಥಿಕ ವಿಚಾರಗಳಲ್ಲಿ ಹೆಚ್ಚು ತಿಳಿದವರಲ್ಲ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ, ಅದರಲ್ಲೂ ಹೆಚ್ಚಾಗಿ ಮನೆವಾರ್ತೆಯಲ್ಲಿ ಮಾತ್ರ ತೊಡಗಿಕೊಂಡವರಿಗೆ ಸ್ವಂತ ಖರ್ಚುಗಳಿಗಾಗಿ ಹೇಗಾದರೂ ಸ್ವಲ್ಪ ಹಣ ಗಳಿಸುವ ಆಸೆಯಿರುತ್ತದೆ.

ಜೊತೆಗೆ ತಮ್ಮ ಮನೆಗಳಿಗಾಗಿ ಕಡಿಮೆ ಹಣದಲ್ಲಿ ಅಥವಾ ಕಂತುಗಳಲ್ಲಿ ಗ್ರಾಹಕ ವಸ್ತುಗಳನ್ನು ಕೊಳ್ಳುವ ಆಸೆಯೂ ಇರುತ್ತದೆ. ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಈ ಆಸೆಯ ಬೆಂಕಿಗೆ ತುಪ್ಪ ಸುರಿದು ಅವರನ್ನು ಆಕರ್ಷಿಸುವುದಕ್ಕೆ ಸಾಕಷ್ಟು ಜನ ಕಾದಿರುತ್ತಾರೆ.

ಆಸೆ ಇರುವುದು ತಪ್ಪೇನಲ್ಲ, ಬಿಡಿ. ಆದರೆ ಅದನ್ನು ಪೂರೈಸಿಕೊಳ್ಳಲು ಬೇಕಾದ ದಾರಿಗಳು ಅವರಿಗೆ ಕಾಣುವುದಿಲ್ಲ. ಇದಕ್ಕಾಗಿ ಸರಿಯಾದ ಮಾರ್ಗದಲ್ಲಿ ಒಂದು ಕಾಯಮ್ಮೋದ ಆದಾಯ ಮೂಲ ಹುಡುಕಿಕೊಳ್ಳುವ ಬಗೆಗೆ ಸಂಪೂರ್ಣ ಮಾಹಿತಿ ಮತ್ತು ಮನಃಸ್ಥಿತಿ ಇಲ್ಲದ ಅವರೆಲ್ಲ ಯಾವ್ಯಾವುದೋ ದಾರಿಗಳ ಹಿಂದೆ ಬಿದ್ದು ಮೋಸಹೋಗುತ್ತಾರೆ.

ಮಹಿಳೆಯರಿಗೆ ಸಮಾನ ಸಂಖ್ಯೆಯಲ್ಲಿ ಗಂಡಸರೂ ಇಂತಹ ಆಮಿಷಗಳಿಗೆ ಸಿಲುಕಿ ಮೋಸಹೋಗಿರುತ್ತಾರೆ. ಆದರೆ ಆರ್ಥಿಕವಾಗಿ ಸ್ವಾವಲಂಬಿಗಳಲ್ಲದ ಮಹಿಳೆಯರು ಹೆಚ್ಚಿನ ಕಿರಿಕಿರಿ ಅನುಭವಿಸುತ್ತಾರೆ.

ವಿನಿವಿಂಕ್ ಶಾಸ್ತ್ರಿಯ ಮೋಸದ ಕಥೆ ನಿಮಗೆಲ್ಲ ನೆನಪಿರಬೇಕಲ್ಲ? ಬಹುಶಃ ಮರೆತಿರಲೂಬಹುದು. ಜನ ಹೀಗೆ ಮರೆಯುವುದನ್ನೇ ಈ ರೀತಿಯ ವಂಚಕರು ಬಂಡವಾಳ ಆಗಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ ಶಾಸ್ತ್ರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಗ್ಧ ಬಳಕೆದಾರರನ್ನು ವಂಚಿಸಿದವರ ಕಥೆಗಳು ಸಾಕಷ್ಟಿವೆ. ಈ ದಗಲಬಾಜಿಗಳಿಗೆ ಶಿಕ್ಷೆಯಾಯಿತೋ ಬಿಟ್ಟಿತೋ ಅನ್ನುವುದು ಯಾರಿಗೂ ಗೊತ್ತಿಲ್ಲ.

ಆದರೆ ಒಂದಂತೂ ಖಾತ್ರಿ- ಇವರಿಂದ ವಂಚನೆಗೆ ಒಳಗಾದವರ ಹಣದ ಹೆಚ್ಚಿನ ಪಾಲು ಹಿಂದಿರುಗಿ ಬಂದಿಲ್ಲ. ಅದಕ್ಕಿಂತ ಹೆಚ್ಚು ಆತಂಕಕಾರಿಯಾದ ಸಂಗತಿಯೆಂದರೆ, ಈ ವಂಚಕರ ಜಾಲ ಬೀದಿಗಳನ್ನು, ಬಡಾವಣೆಗಳನ್ನು ಅಥವಾ ಊರುಗಳನ್ನು ಬದಲಾಯಿಸುತ್ತಿರುತ್ತದೆ ಮತ್ತು ತಮ್ಮ ಆಳ, ವಿಸ್ತಾರಗಳನ್ನು ಪಸರಿಸಿಕೊಳ್ಳುತ್ತಿರುತ್ತದೆ.

ಹಾಗಿದ್ದರೆ ಯಾಕೆ ಇಂತಹ ವಂಚನೆಯ ಪ್ರಕರಣಗಳು ಪುವರಾವರ್ತನೆ ಆಗುತ್ತಲೇ ಇರುತ್ತವೆ? ಇವನ್ನೆಲ್ಲ ನಿಲ್ಲಿಸಲು ಮತ್ತು ವಂಚಿತರಿಗೆ ನ್ಯಾಯ ಒದಗಿಸಲು ಸರ್ಕಾರಿ ವ್ಯವಸ್ಥೆ ಇಲ್ಲವೇ? ನಮ್ಮ ಸರ್ಕಾರಿ ವ್ಯವಸ್ಥೆಯ ಬಗೆಗೆ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು. ಇದರ ವೇಗ, ನಿಷ್ಠೆ, ಪ್ರಾಮಾಣಿಕತೆಯ ಬಗೆಗೆ ಎಲ್ಲರಿಗೂ ತಿಳಿದೇ ಇದೆ. 

ನ್ಯಾಯವನ್ನು ಕೇಳುವವರೇ ವಂಚಿಸುವವರಿಗಿಂತ ಹೆಚ್ಚು ತೊಂದರೆಗೆ ಒಳಗಾಗುವ ಸಂದರ್ಭಗಳೇ ಹೆಚ್ಚು. ಹಾಗಾಗಿ ವಂಚನೆಗೆ ಒಳಗಾಗದಂತೆ ನಾವು ಎಚ್ಚೆತ್ತುಕೊಳ್ಳುವುದು ಮತ್ತು ನಮ್ಮ ಸುತ್ತಲಿನವರನ್ನು ಎಚ್ಚರಿಸಬೇಕಾದ ತುರ್ತು ಅಗತ್ಯ ಈಗ ಇದೆ.

ವಂಚನೆಯ ವಿಧಾನಗಳು
ದಶಕಗಳ ಹಿಂದೆ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಜನರನ್ನು ವಂಚಿಸುವ ಸಾಕಷ್ಟು ಕಂಪೆನಿಗಳು ಎಲ್ಲ ಕಡೆ, ಅದರಲ್ಲೂ ಹೆಚ್ಚಾಗಿ ಕೇರಳದಲ್ಲಿ ಹುಟ್ಟಿಕೊಂಡಿದ್ದವು. ಅವುಗಳನ್ನು `ಬ್ಲೇಡ್ ಕಂಪೆನಿಗಳು' ಎಂದು ಕರೆಯಲಾಗಿತ್ತು.

ಇವುಗಳನ್ನು ಹಿಡಿತದಲ್ಲಿಡಲು ಸರ್ಕಾರ ಸಾಕಷ್ಟು ಕ್ರಮಗಳನ್ನೇನೋ ತೆಗೆದುಕೊಂಡಿದೆ. ಆದರೆ ಈಗ ವಂಚನೆಯ ಸ್ವರೂಪ, ಆಳ, ವಿಸ್ತಾರಗಳೆಲ್ಲಾ ಬದಲಾಗಿವೆ ಮತ್ತು ಹೆಚ್ಚಾಗಿವೆ. ಸದ್ಯಕ್ಕೆ ಈ ರೀತಿ ಜನರನ್ನು ವಂಚಿಸುವ ಎಲ್ಲ  ಕಂಪೆನಿಗಳನ್ನೂ ಒಟ್ಟಾಗಿ `ಬ್ಲೇಡ್ ಕಂಪನಿಗಳು' ಎಂದು ಕರೆಯೋಣ. ಇವುಗಳ ವೈವಿಧ್ಯತೆಯ ಕೆಲವು ಮಾದರಿಗಳನ್ನು ಮೊದಲು ನೋಡೋಣ.

ನೆಟ್‌ವರ್ಕ್ ಮಾರ್ಕೆಟಿಂಗ್
ನೀವು ಒಂದು ನಿಗದಿತ ಮೊತ್ತವನ್ನು ನೀಡಿ ಸದಸ್ಯರಾಗಬೇಕು. ಈ ಮೊತ್ತ ಸಾವಿರ ರೂಪಾಯಿಯಿಂದ ಲಕ್ಷಾಂತರ ರೂಪಾಯಿ ಆಗಿರಬಹುದು. ಜಪಾನಿನ `ಮ್ಯೋಗ್ನೆಟಿಕ್ ಬೆಡ್' ಕೊಡುವ ಯೋಜನೆ ಹೊಂದಿದ್ದ ಕಂಪೆನಿಯೊಂದರ ಸದಸ್ಯತ್ವದ ಹಣ ಒಂದು ಲಕ್ಷ ರೂಪಾಯಿ ಆಗಿತ್ತು! ಆ ಕಂಪೆನಿ ಈಗ ಮಂಗಮಾಯ  ಆಗಿದೆ ಎಂದು ಹೇಳಲೇಬೇಕಿಲ್ಲ.

ನೀವು ಕೊಟ್ಟ ಹಣಕ್ಕೆ ಕೆಲವು ವಸ್ತುಗಳನ್ನು ಕೊಡುತ್ತಾರೆ. ಅದರ ಬೆಲೆ ನಿಮ್ಮ ಹಣಕ್ಕೆ ಸಮಾನವಾದುದು ಎಂದು ಕಂಪೆನಿಯವರು ಹೇಳಿದರೂ, ಅದರ ನಿಜ ಬೆಲೆ ತೀರಾ ಕಡಿಮೆ ಇರುತ್ತದೆ. ನಂತರ ನೀವು ಹೊಸ ಹೊಸ ಸದಸ್ಯರನ್ನು ಸರಣಿಯಲ್ಲಿ ನಿಮ್ಮ ಕೆಳಗೆ ನೋಂದಾಯಿಸುತ್ತಾ ಹೋದಂತೆ ನಿಮಗೆ ಕಮಿಷನ್ ಬರುತ್ತಾ ಹೋಗುತ್ತದೆ, ನೀವು ಹಾಕಿದ ಹಣದ ಸಾವಿರಾರು ಪಟ್ಟು ಗಳಿಸಬಹುದು ಎಂದು ಕಂಪೆನಿಗಳು ಪ್ರಚಾರ ಮಾಡುತ್ತವೆ.

ಪ್ರಾರಂಭದಲ್ಲಿ ಇವರು ಉತ್ತಮ ಹೋಟೆಲ್‌ಗಳಲ್ಲಿ ಸಭೆ ಕರೆದು ಯಾರ‌್ಯಾರದ್ದೋ ಯಶೋಗಾಥೆಗಳನ್ನು ಆಕರ್ಷಕವಾಗಿ ವರ್ಣಿಸಿ, ನೀವೆಲ್ಲ ಕೆಲಸವನ್ನೇ ಮಾಡದೆ ಜೀವನಪರ್ಯಂತ ಲಕ್ಷ, ಕೋಟಿ ಗಳಿಸಿ ಪ್ರಪಂಚವನ್ನೆಲ್ಲಾ ಸುತ್ತಬಹುದು ಎಂದೆಲ್ಲ ಹೇಳಿ ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸುತ್ತಾರೆ. ಕಷ್ಟಪಟ್ಟು ದುಡಿದು ಗಳಿಸುವವರೆಲ್ಲ ಮೂರ್ಖರು ಎನ್ನುವಂತೆ ಬಣ್ಣಿಸುತ್ತಾ, ಕೆಲವೇ ತಿಂಗಳಲ್ಲಿ ಹೇಳಹೆಸರಿಲ್ಲದಂತೆ ಕಾಣೆಯಾಗುತ್ತಾರೆ.

ನಮ್ಮ ಹಣವನ್ನು ಕಳೆದುಕೊಂಡಿದ್ದಲ್ಲದೇ,  ಮುಲಾಜನ್ನು ಖರ್ಚು ಮಾಡಿ ನೆಂಟರಿಷ್ಟರನ್ನೆಲ್ಲಾ ಸದಸ್ಯರನ್ನಾಗಿ ಮಾಡಿದ ನಾವು, ಅವರಿಂದ ತಪ್ಪಿಸಿಕೊಂಡು ಓಡಾಡಬೇಕಾಗುತ್ತದೆ; ಕೆಲವೊಮ್ಮೆ ಅವರಿಂದ ಚೆನ್ನಾಗಿ ಉಗಿಸಿಕೊಂಡು ಸಂಬಂಧಗಳನ್ನು ಹಾಳುಮಾಡಿ ಕೊಳ್ಳಬೇಕಾಗುತ್ತದೆ.

ಹಣದ ಸರಪಳಿಗಳು
ಇವು ಮೇಲೆ ಹೇಳಿದ ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪೆನಿಗಳಂತೆಯೇ ಕೆಲಸ ಮಾಡುತ್ತವೆ. ಒಂದೇ ವ್ಯತ್ಯಾಸವೆಂದರೆ, ನಾವು ಸದಸ್ಯತ್ವಕ್ಕಾಗಿ ಕೊಡುವ ಹಣಕ್ಕೆ ಬದಲಾಗಿ ಇವು ಯಾವುದೇ ವಸ್ತುಗಳನ್ನು ನೀಡುವುದಿಲ್ಲ.

ನೀವು ನೋಂದಾಯಿಸಿದ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಆಕರ್ಷಕ ಕಮಿಷನ್ ನೀಡುವ ಭರವಸೆ ನೀಡುತ್ತಾರೆ. ನೀವು ಕೊಡುವ ಹಣವನ್ನು ಅವರು ಹೇಗೆ ಮತ್ತು ಎಲ್ಲಿ ಹೂಡುತ್ತಾರೆ, ಅವರ ಆದಾಯದ ಮೂಲಗಳೇನು ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ.

ಬಡ್ಡಿ ನೀಡುವ ಕಂಪೆನಿಗಳು
ನಿಮ್ಮಿಂದ ನಿಗದಿತ ಮೊತ್ತದ ಹಣವನ್ನು ಡಿಪಾಸಿಟ್ ಆಗಿ ಪಡೆಯುವ ಈ ಕಂಪೆನಿಗಳು ನಿರ್ದಿಷ್ಟ ಅವಧಿಯ ನಂತರ ಹಣದ ಮೊತ್ತದ ಹತ್ತಾರು ಪಟ್ಟು ಬೆಲೆಯ ವಸ್ತುಗಳನ್ನು ನೀಡುವುದಾಗಿ ಆಶ್ವಾಸನೆ ನೀಡುತ್ತವೆ. ಉದಾಹರಣೆಗೆ ನೀವು ಈಗ 10 ಸಾವಿರ ರೂಪಾಯಿ ಕೊಟ್ಟರೆ ಮೂರು ತಿಂಗಳ ನಂತರ 30  ಸಾವಿರ ಬೆಲೆಯ ಎಲ್.ಸಿ.ಡಿ. ಟಿ.ವಿ ಕೊಡುವ ಭರವಸೆ ಕೊಡುತ್ತಾರೆ.

ಇನ್ನು ಕೆಲವರು ನಮ್ಮ 10 ಸಾವಿರ ರೂಪಾಯಿಗೆ ಪ್ರತಿಯಾಗಿ ತಿಂಗಳಿಗೊಮ್ಮೆ ಸಾವಿರ ರೂಪಾಯಿಯನ್ನು ನಿರಂತರವಾಗಿ ನೀಡುವ ಭರವಸೆ ನೀಡುತ್ತಾರೆ. ಇನ್ನೂ ಹಲವರು ಅವಧಿ ಮುಗಿದ ಮೇಲೆ ಅಸಲನ್ನೂ ಹಿಂದಿರುಗಿಸುವ ಆಸೆ ತೋರಿಸುತ್ತಾರೆ.

ಅವರು ಕೊಡುತ್ತೇವೆಂದು ಹೇಳುವ ಬಡ್ಡಿ ವಾರ್ಷಿಕವಾಗಿ ಶೇ 120 ಆಗುತ್ತದೆ. ಬ್ಯಾಂಕ್‌ಗಳು ಕೇವಲ ಶೇ 8-10ರಷ್ಟು ಬಡ್ಡಿ ಕೊಡುವಾಗ ಇಂತಹ ಸ್ಕೀಮ್‌ಗಳು ಜನರನ್ನು ಸೆಳೆಯುವುದರಲ್ಲಿ ಆಶ್ಚರ್ಯವೇನು?

ತಮ್ಮ ಪ್ರಾಮಾಣಿಕತೆಯನ್ನು ತೋರಿಸಲು ಆರಂಭದಲ್ಲಿ ಕೆಲವರಿಗೆ ಭರವಸೆ ನೀಡಿದಂತೆ ವಸ್ತುಗಳು ಅಥವಾ ಬಡ್ಡಿಯನ್ನು ಕೊಟ್ಟಿರುತ್ತಾರೆ. ಕೆಲವು ನಯವಂಚಕರು ತಮ್ಮ ಕಡೆಯ ಜನಗಳನ್ನೇ ಜನರ ಮಧ್ಯೆ ಬಿಟ್ಟು, ತಮಗೆ ಹಣ ಅಥವಾ ಬಹುಮಾನ ಈಗಾಗಲೇ ಬಂದಿದೆಯೆಂದು ಸುಳ್ಳು ಪ್ರಚಾರ ಮಾಡಿಸಿರುತ್ತಾರೆ! ನಂತರ ಕೆಲವೇ ದಿನಗಳಲ್ಲಿ ಅವರು ಸಾಕಷ್ಟು ಹಣ ಸಂಗ್ರಹಿಸಿ ರಾತ್ರೋರಾತ್ರಿ ಜಾಗ ಖಾಲಿ ಮಾಡುತ್ತಾರೆ.

ಚಿನ್ನದ ಸ್ಕೀಮ್‌ಗಳು
ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳಿಂದ ಹಿಡಿದು ಬಡಾವಣೆ ಮೂಲೆಯಲ್ಲಿರುವ ಅಂಗಡಿಗಳವರೂ ಮಾಡುತ್ತಿರುವ ಈ ರೀತಿಯ ಸ್ಕೀಮ್‌ಗಳು ಸಾಕಷ್ಟು ವಿಶ್ವಾಸಾರ್ಹವಾಗಿದ್ದು ವರ್ಷಗಳಿಂದ ನಡೆಯುತ್ತಾ ಬಂದಿವೆ. ಸದಸ್ಯರಿಂದ ನಿರ್ದಿಷ್ಟ ಮೊತ್ತದ ಹಣ ತೆಗೆದುಕೊಂದು ತಿಂಗಳಿಗೊಮ್ಮೆ ಲಾಟರಿ ನಡೆಸುತ್ತಾರೆ.

ವಿಜೇತರಾದ ಒಬ್ಬರಿಗೆ ಆ ತಿಂಗಳೇ ಭರವಸೆ ನೀಡಿದ ಬಂಗಾರದ ಆಭರಣ ನೀಡುತ್ತಾರೆ ಮತ್ತು ಅವರು ಮುಂದೆ ಹಣ ಕಟ್ಟುವ ಅಗತ್ಯ ಇರುವುದಿಲ್ಲ. ವಿಜೇತರಾಗದೇ ಉಳಿದವರಿಗೆ ಅವಧಿಯ ನಂತರ ಅವರ ಹಣದ ಮೊತ್ತಕ್ಕೆ ಸಮನಾದ ಆಭರಣ ನೀಡುತ್ತಾರೆ.

ಈ ಸ್ಕೀಮ್‌ಗಳನ್ನು ನಡೆಸುವವರು ಬರುವ ಲಾಭದ ಒಂದಂಶದಲ್ಲಿ ಪ್ರತಿ ತಿಂಗಳೂ ಬಹುಮಾನ ನೀಡುತ್ತಾರೆ ಎಂದು ತರ್ಕಿಸಬಹುದು. ಹಾಗಿದ್ದರೂ ಯೋಜನೆ ನಡೆಸುವವರ ವಿಶ್ವಾಸಾರ್ಹತೆ, ಅವಧಿಯ ನಂತರ ನೀಡುವ ಆಭರಣಗಳ ಬೆಲೆ, ಗುಣಮಟ್ಟ ಮುಂತಾದ ಅಂಶಗಳನ್ನೆಲ್ಲಾ ನಿಧಾನವಾಗಿ ಯೋಚಿಸಿ ಹಣ ಹೂಡುವ ನಿರ್ಧಾರ ಮಾಡಬೇಕು.

ಚಿಟ್ ಫಂಡ್‌ಗಳು
ಜನಸಾಮಾನ್ಯರ ಭಾಷೆಯಲ್ಲಿ ಚೀಟಿ ಎಂದು ಕರೆಸಿಕೊಳ್ಳುವ ಇದು ಸರ್ವವ್ಯಾಪಿ. ಕಚೇರಿ, ಬಡಾವಣೆ, ಹೆಂಗಸರ ಕಿಟ್ಟಿಪಾರ್ಟಿ, - ಹೀಗೆ ಎಲ್ಲಾ ಕಡೆಯೂ ಇದರ ವ್ಯವಹಾರವಿದೆ. ದೊಡ್ಡ ದೊಡ್ಡ ಫೈನಾನ್ಸ್ ಕಂಪೆನಿಗಳು ಇದನ್ನು ವಿಶ್ವಾಸಾರ್ಹವಾಗಿ ನಡೆಸಿಕೊಂಡು ಬಂದಿವೆ.

ಇವೆಲ್ಲದರ ನಡುವೆಯೂ ಅನಾಮಧೇಯರಿಂದ ಜನರು ಹಣ ಕಳೆದುಕೊಂಡ ಉದಾಹರಣೆಗಳೂ ದಂಡಿಯಾಗಿ ಸಿಗುತ್ತವೆ. ಸ್ನೇಹಿತರ ಗುಂಪಿನಲ್ಲಿ ಚೀಟಿ ನಡೆಸಿ ಸ್ನೇಹ, ಹಣ ಎರಡನ್ನೂ ಕಳೆದುಕೊಂಡವರಿದ್ದಾರೆ. ಹಾಗಾಗಿ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳದೆ, ಯಾವುದೇ ಆಸೆಗೆ ಚಿಟ್‌ಗಳ ಸದಸ್ಯರಾಗಬಾರದು.

ಟೀಕ್ ಪ್ಲಾಂಟೇಷನ್‌ಗಳು
ನೀವು ನಿರ್ದಿಷ್ಟ ಮೊತ್ತದ ಹಣ ಕೊಟ್ಟರೆ ನಿಮಗಾಗಿ ಕಂಪೆನಿಯ ಜಾಗದಲ್ಲಿ ತೇಗದ ಮರವೊಂದನ್ನು ಕಾದಿರಿಸಲಾಗುತ್ತದೆ. 15- 20 ವರ್ಷಗಳ ನಂತರ ಆ ಮರದಿಂದ ಬರುವ ಹಣ ನಿಮ್ಮದಾಗುತ್ತದೆ.

ಈ ರೀತಿ ನೀವು ಹೂಡಿದ ಹಣದ ಹತ್ತಾರು ಪಟ್ಟು ಹಣ ನಿಮಗೆ ಸಿಗುತ್ತದೆ ಎನ್ನುವುದು ಅವರ ಅಂಬೋಣ. ಇತ್ತೀಚೆಗೆ ಈ ಕಂಪೆನಿಗಳ ಭರಾಟೆ ಕಡಿಮೆಯಾಗಿರುವುದನ್ನು ನೋಡಿದರೆ ಹಳೆಯ ಕಂಪೆನಿಗಳೆಲ್ಲ ಪಾಪರ್ ಚೀಟಿ ತೆಗೆದುಕೊಂಡಂತೆ ಕಾಣುತ್ತದೆ.

ವಂಚನೆಯ ನೂತನ ಮಾದರಿಗಳು
ಇಲ್ಲಿ ಹೇಳಿರುವುದು ಕೆಲವೇ ಉದಾಹರಣೆಗಳು ಮಾತ್ರ. ನಾನು ಮೇಲೆ ಹೇಳಿದಂತೆ ಸರ್ಕಾರ ಒಂದು ರೀತಿಯ ವಂಚನೆಯನ್ನು ನಿಭಾಯಿಸಲು ಕಾನೂನು ರೂಪಿಸುತ್ತಿದ್ದಂತೆಯೇ, ಹೊಸ ಹೊಸ ಮೋಸದ ಯೋಜನೆಗಳು ಶುರುವಾಗುತ್ತವೆ. ಅಂದರೆ ಎಲ್ಲ ಕ್ಷೇತ್ರಗಳಲ್ಲಿ ಆಗುವಂತೆ ಇಲ್ಲೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿರುತ್ತವೆ!

ಇತ್ತೀಚೆಗೆ ಸಿಂಗಾಪುರ ಮೂಲದ `ಸ್ಪೀಕ್ ಏಷಿಯಾ' ಎನ್ನುವ ಕಂಪೆನಿಯು ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಪ್ರಚಾರ ಮಾಡುವುದನ್ನು ಗಮನಿಸುತ್ತಿದ್ದೆ. ಕೆಲವು ದಿನಗಳ ಹಿಂದೆ ಪರಿಚಿತನೊಬ್ಬ ಇದರ ಸದಸ್ಯನಾಗಲು ಪುಸಲಾಯಿಸಿದ. 10 ಸಾವಿರ ರೂಪಾಯಿ ಕೊಟ್ಟು ಸದಸ್ಯರಾದರೆ ನಮಗೆ ಪ್ರತಿ ತಿಂಗಳು ನಾಲ್ಕು ಮಾರುಕಟ್ಟೆ ಸರ್ವೆಗಳಿಗೆ ಪ್ರತಿಕ್ರಿಯಿಸುವ ಅವಕಾಶ ಸಿಗುತ್ತದೆ.

ಅಂತರ್ಜಾಲದ ಮೂಲಕ ನಡೆಯುವ ಸರ್ವೆಯೊಂದಕ್ಕೆ ನಮಗೆ ಸಾವಿರ ರೂಪಾಯಿ ಸಂಭಾವನೆ ಸಿಗುತ್ತದೆ. ಅಂದರೆ ಮೂರು ತಿಂಗಳಿಗೆ ನೀವು ಹೂಡಿದ ಹಣ ಹಿಂತಿರುಗಿ, ನಂತರ ತಿಂಗಳಿಗೆ ನಾಲ್ಕು ಸಾವಿರ ಮುಫತ್ತಾಗಿ ಸಿಗುತ್ತದೆ. ಜೊತೆಗೆ ಹೊಸ ಸದಸ್ಯರನ್ನು ಪರಿಚಯಿಸುವವರಿಗೆ ಹೆಚ್ಚಿನ ಆದಾಯವಿದೆ. ಎಂತಹ ವಿದ್ಯಾವಂತರನ್ನೂ ಆಕರ್ಷಿಸಬಲ್ಲ ಇಂತಹ ಯೋಜನೆಗಳು ಹಲವಾರು ಇರಬಹುದು.

ನಾನು ಕಂಪೆನಿಯ ಮೂಲವನ್ನೆಲ್ಲಾ ಜಾಲಾಡಿದರೂ ಖಚಿತ ಮಾಹಿತಿಗಳು ಸಿಗಲಿಲ್ಲ. ಕಂಪೆನಿಯ ವೆಬ್‌ಸೈಟ್ ಒಮ್ಮೆಯೂ ತೆರೆದುಕೊಳ್ಳಲೇ ಇಲ್ಲ. ನಂತರ ಭಾರತ ಸರ್ಕಾರ ಈ ಕಂಪೆನಿಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ ಕಾನೂನು ಕ್ರಮ ತೆಗೆದುಕೊಂಡಿದೆ. ಆದರೆ ಅದಕ್ಕೂ ಮೊದಲೇ ಸಾಕಷ್ಟು ಜನ ಹಣ ಕಳೆದುಕೊಂಡಿರುವ ಸಾಧ್ಯತೆಗಳಿವೆ.

ಆದಾಯದ ಮೂಲಗಳೇನು?
ನಾವು ಹಣ ಹೂಡುವ ಕಂಪೆನಿಯ ಬಗೆಗೆ ಯಾವುದೇ ಅಂತೆಕಂತೆಗಳನ್ನು ನಂಬದೆ, ಮೊದಲು ಸಂಪೂರ್ಣ ವಿವರ ಪಡೆಯಬೇಕು. ಸಾಮಾನ್ಯವಾಗಿ ಬ್ಯಾಂಕ್‌ಗಳು ವಾರ್ಷಿಕ ಶೇ 8-10ರಷ್ಟು ಬಡ್ಡಿ ನೀಡುತ್ತವೆ. ಷೇರು ಮತ್ತು ಮ್ಯೂಚುಯಲ್ ಫಂಡ್‌ಗಳಲ್ಲಿ ಸುಮಾರು ಶೇ 15-20ರಷ್ಟು ಆದಾಯ ಬರಬಹುದು.

ಆದರೆ ಬ್ಯಾಂಕ್‌ಗಳು ನೀಡುವ ಮಟ್ಟದ ಸ್ಥಿರತೆ ಮತ್ತು ಭದ್ರತೆ ಇವುಗಳಿಗೆ ಇರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮದ ಅಗತ್ಯ ಮತ್ತು ಬಹಳ ಅಸ್ಥಿರತೆ ಇದ್ದು, ಶೇ 25ರಷ್ಟು ನಿವ್ವಳ ಆದಾಯ ಬರಬಹುದು. ಹೀಗಿರುವಾಗ ಈ ಕಂಪೆನಿಗಳು ತಮಗೂ ಲಾಭ ಮಾಡಿಕೊಂಡು, ಹಣ ಹೂಡಿದವರಿಗೂ ಶೇಕಡಾ ನೂರಕ್ಕಿಂತ ಹೆಚ್ಚಿನ ಪ್ರತಿಫಲ ಕೊಡುವುದು ಹೇಗೆ ಸಾಧ್ಯ?

ಹೆಚ್ಚಿನ ಕಂಪೆನಿಗಳು ತಮ್ಮ ಆದಾಯ ಮೂಲಗಳ ಬಗೆಗೆ ಮಾತನಾಡುವುದೇ ಇಲ್ಲ. ಆದರೆ ಹಣ ಹೂಡುವ ನಾವು ಅದನ್ನೆಲ್ಲಾ ಪ್ರಶ್ನಿಸಲೇಬೇಕಾಗುತ್ತದೆ. ಇದಕ್ಕೆ ಸರಿಯಾದ ಉತ್ತರ ಇಲ್ಲ ಎಂದಾದರೆ ಅವರು ನಮಗೆ ಹಣ ಕೊಡಲು ಇನ್ನೊಬ್ಬರಿಗೆ ಮೋಸ ಮಾಡುತ್ತಾರೆ ಎಂಬುದು ಖಚಿತ.

ಯಾರಿಗೆ ಟೋಪಿ ಬಿದ್ದರೇನು, ನಮಗೆ ಹಣ ಸಿಕ್ಕರಾಯಿತು ಎಂದು ಯೋಚಿಸುವವರೆಲ್ಲ ಒಂದು ಮಾತು ನೆನಪಿಟ್ಟುಕೊಳ್ಳಬೇಕು. ಅದೆಂದರೆ, ಆ ರೀತಿ ಟೋಪಿ ಹಾಕಿಸಿಕೊಳ್ಳುವವರು ನಾವೇ ಆಗಿರುವ ಸಾಧ್ಯತೆ ಇರಬಹುದಲ್ಲವೇ?

ಗ್ರಾಹಕರ ಅಜ್ಞಾನ ಮತ್ತು ಅತಿ ಆಸೆಯೇ ಹೆಚ್ಚಿನ ಸಂದರ್ಭಗಳಲ್ಲಿ ವಂಚನಗೆ ಕಾರಣವಾಗುತ್ತದೆ. ಮೋಸಗಾರರು ಹೊಸ ವೇಶ, ಆಶ್ವಾಸನೆಗಳೊಂದಿಗೆ ಬರುತ್ತಲೇ ಇರುತ್ತಾರೆ. ಅವರಿಂದ ದೂರ ಉಳಿಯುವ ಎಚ್ಚರಿಕೆ ನಮಗಿರಬೇಕು.

ಹಣ ಕಳೆದುಕೊಂಡ ಮೇಲೆ ಕಂಪೆನಿ ಕಚೇರಿಯನ್ನು ಘೇರಾವ್ ಮಾಡುವುದು, ಪೋಲೀಸ್ ಠಾಣೆ ಎದುರು ಸೇರಿ ಪ್ರತಿಭಟಿಸುವುದು ಅಥವಾ ಟಿ.ವಿ ಕ್ಯಾಮೆರಾಗಳ ಮುಂದೆ ಗೋಳು ತೋಡಿಕೊಳ್ಳುವುದರಿಂದ ಏನು ಪ್ರಯೋಜನ?

ಇಂತಹ ಬ್ಲೇಡ್ ಕಂಪೆನಿಗಳು ನಿಮ್ಮ ಬಡಾವಣೆಗೆ ಬಂದ ತಕ್ಷಣ ಪೋಲೀಸರಿಗೆ ದೂರು ನೀಡಿ ಮತ್ತು ಜನರನ್ನು ಎಚ್ಚರಿಸಿ. ಇಲ್ಲದಿದ್ದರೆ ಈ ರೀತಿಯ ವಂಚನೆಗಳು ಪುನರಾವರ್ತನೆ ಆಗುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT