ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಬೋಧಿಸುವಂತಿಲ್ಲ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿರುವಾಗ ಶಾಲಾ ಮಕ್ಕಳಿಗೆ ಭಗವದ್ಗೀತೆ ಕಂಠಪಾಠ ಮಾಡಿಸುವ ಮುಖ್ಯಮಂತ್ರಿಗಳ ಆಶಯಕ್ಕೆ ಅರ್ಥವೇ ಇಲ್ಲ.
ಇಷ್ಟಕ್ಕೂ ಭಗವದ್ಗೀತೆಯ ಅಧ್ಯಯನದ ಅಗತ್ಯ ಇರುವುದು ದೊಡ್ಡವರಿಗೆ. ಅವರ ಕೊಳಕು ಮನಸ್ಸುಗಳಿಗೆ ಭಗವದ್ಗೀತೆ ಮಾರ್ಜಕ.
ಜಾತಿ- ಜಾತಿ ಎಂದು ಬಡಿದಾಡುವವರಿಗೆ, ಅನಿಷ್ಟ ಆಚರಣೆಗಳನ್ನು ಪ್ರೋತ್ಸಾಹಿಸುವವರಿಗೆ, ಅಸ್ಪೃಶ್ಯತೆ ಆಚರಿಸುವವರಿಗೆ, ಸಂಬಳ ಪಡೆದು ಕೆಲಸ ಮಾಡದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ, ಜನಸೇವೆ ಮರೆತು ಹಣ ಗಳಿಕೆಯಲ್ಲೇ ತೊಡಗಿರುವ ಚುನಾಯಿತ ಪ್ರತಿನಿಧಿಗಳಿಗೆ ಭಗವದ್ಗೀತೆಯ ಅಗತ್ಯವಿದೆ.
ಅಷ್ಟೇ ಅಲ್ಲ, ರೈತರನ್ನು ಶೋಷಣೆ ಮಾಡುವವರಿಗೆ, ಖನಿಜ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವವರಿಗೆ, ಭ್ರಷ್ಟ ರಾಜಕಾರಣಿಗಳಿಗೆ ಭಗವದ್ಗೀತೆಯ ಅಧ್ಯಯನದ ಅಗತ್ಯವಿದೆ. ಮುಖ್ಯಮಂತ್ರಿ ಸದಾನಂದ ಗೌಡರು ಮೇಲೆ ಪ್ರಸ್ತಾಪಿಸಿದ ವ್ಯಕ್ತಿಗಳಿಗೆ ಭಗವದ್ಗೀತೆ ವಾಚನಕ್ಕೆ ವ್ಯವಸ್ಥೆ ಮಾಡಲಿ.