ನವದೆಹಲಿ: ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಪಠ್ಯಗಳಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುವ ಪ್ರಸ್ತಾವ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
ಭಗವದ್ಗೀತೆ ಮಾತ್ರವಲ್ಲದೆ ಕುರಾನ್ ಮತ್ತು ಬೈಬಲ್ನಲ್ಲಿ ಇರುವ ಒಳ್ಳೆಯ ಅಂಶಗಳನ್ನು ಪಠ್ಯಗಳಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.
ಧರ್ಮ ಗ್ರಂಥಗಳಲ್ಲಿರುವ ಒಳ್ಳೆಯ ಅಂಶಗಳನ್ನು ತಜ್ಞರ ಸಮಿತಿ ಶಿಫಾರಸು ಮಾಡಲಿದೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಅಂಶಗಳನ್ನು ಪಠ್ಯಗಳಲ್ಲಿ ಸೇರಿಸಲಾಗುವುದು. ಮಧ್ಯಪ್ರದೇಶದಲ್ಲಿ ಈಗಾಗಲೇ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲಾಗುತ್ತಿದೆ. ಅಲ್ಲಿಂದಲೂ ವಿವರ ಪಡೆಯಲಾಗುವುದು. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ಜನಾಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಮಕ್ಕಳಿಗೆ ಭಗವದ್ಗೀತೆ ಬೋಧಿಸುವ ತಮ್ಮ ಸರ್ಕಾರದ ನಿಲುವನ್ನು ಈಗಾಗಲೇ ಪ್ರಕಟಿಸಿದ್ದಾರೆ.
ಇದಕ್ಕೂ ಮೊದಲು ಕಾಗೇರಿ, ಶಾಲೆಗಳಲ್ಲಿ ನಡೆಯುತ್ತಿರುವ ನಿಯಮಬಾಹಿರ ಚಟುವಟಿಕೆ ಕುರಿತು ಜಾರಿಗೆ ತರಲು ಉದ್ದೇಶಿಸಿರುವ ಮಸೂದೆ ಕುರಿತು ಸಲಹೆ ಮಾಡಲು ರಚಿಸಲಾಗಿರುವ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.
ಡೊನೇಷನ್ ಹಾವಳಿ ತಡೆಯಲು ಎಲ್ಲ ವಿಧದ ನೆರವನ್ನು ಚೆಕ್, ಡಿಡಿ ಮೂಲಕ ಪಡೆಯುವಂತಾಗಬೇಕು. ತರಬೇತಿ ಪಡೆದ ಶಿಕ್ಷಕರನ್ನೇ ನೇಮಕ ಮಾಡಬೇಕು. ಮಕ್ಕಳಿಗೆ ಖಾಸಗಿ ಪಾಠ ಹೇಳುವುದನ್ನು ನಿಷೇಧ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.