ಬಸವಾಪಟ್ಟಣ: ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಸಾರ್ಥಕ ಬದುಕಿನ ದಾರಿ ತೋರಿದ ಭಗವದ್ಗೀತೆ ವಿಶ್ವದ ಶ್ರೇಷ್ಠ ಗ್ರಂಥ ಎಂದು ದಾವಣಗೆರೆ ಜಡೆಸಿದ್ಧಾಶ್ರಮದ ಶಿವಾನಂದ ಸ್ವಾಮೀಜಿ ನುಡಿದರು. ಅವರು ಇಲ್ಲಿಗೆ ಸಮೀಪದ ಚಿರಡೋಣಿಯ ಗಾಯತ್ರಿ ಸಭಾ ಭವನದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಗವದ್ಗೀತೆಯಲ್ಲಿ ಇರುವ ಎಲ್ಲಾ 700 ಶ್ಲೋಕಗಳು ಯಾವ ಸಂಕುಚಿತ ಅಂಶವನ್ನು ಬಿಂಬಿಸದೇ ವಿಶ್ವದ ಎಲ್ಲಾ ಜನರ ಮೌಢ್ಯತೆಯನ್ನು ದೂರಮಾಡಿ ಮಾನವನ ನಿಜವಾದ ಕರ್ತವ್ಯವನ್ನು ತಿಳಿಸಿಕೊಡುತ್ತದೆ. ಆ ಮೂಲಕ ಎಲ್ಲರನ್ನೂ ಉತ್ತಮ ವ್ಯಕ್ತಿಗಳನ್ನಾಗಿಸುವ ಈ ಗ್ರಂಥವನ್ನು ಜಾತಿ, ಧರ್ಮಗಳ ಭೇದವಿಲ್ಲದೇ ಪಠಿಸಿ ಅರ್ಥೈಸಿ ಕೊಳ್ಳಬೇಕೆಂದು ಶಿವಾನಂದ ಸ್ವಾಮೀಜಿ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಧ್ಯಾತ್ಮಿ ಎಚ್. ತಿಪ್ಪೇರುದ್ರಪ್ಪ ಮಾತನಾಡಿ, ಪ್ರಯಾಣಿಕನ ಖರ್ಚಿಗೆ ಹಣದ ಆವಶ್ಯಕತೆ ಇರುವಂತೆ ಮನುಷ್ಯನಿಗೆ ತನ್ನ ಕೊನೆಯ ಪ್ರಯಾಣದಲ್ಲಿ ಪುಣ್ಯ ಎಂಬ ಹಣದ ಗಂಟು ಅವಶ್ಯಕ. ಸದ್ಗುಣಗಳಿಂದ ಈ ಪುಣ್ಯದ ಗಳಿಕೆ ಸಾಧ್ಯ. ಭಗವದ್ಗೀತೆಯಂತಹ ಗ್ರಂಥವು ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಬಲ್ಲದು ಎಂದರು.ಬೆಂಗಳೂರಿನ ಶಂಕರಾನಂದ ಆಶ್ರಮದ ಗೀತಾಶಂಕರ್, ಕಿತ್ತೂರಿನ ಆಂಜನೇಯ ಸ್ವಾಮೀಜಿ, ಯಕ್ಕನಹಳ್ಳಿಯ ಕೃಷ್ಣಾನಂದ ಸ್ವಾಮೀಜಿ, ಬೆಂಗಳೂರಿನ ಶಂಕರಾನಂದ ಆಶ್ರಮದ ಅನ್ನಪೂರ್ಣಾ ದೇವಿ, ದಾವಣಗೆರೆಯ ಯೋಗಾಚಾರ್ಯ ನೀಲಪ್ಪ, ಗಾಯತ್ರಿ ಸಮಾಜದ ಅಧ್ಯಕ್ಷ ಶ್ರೀಧರಾಚಾರ್ ಮಾತನಾಡಿದರು.ಅನಿತಾ ಪ್ರಾರ್ಥಿಸಿದರು. ಸಂಚಾಲಕ ಎಂ.ಬಿ. ರಾಜಪ್ಪ ಸ್ವಾಗತಿಸಿದರು. ಎ. ರಾಮನಾಥ ವಂದಿಸಿದರು.