ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಾನ್ ವಿರುದ್ಧ ಮತ್ತೆರಡು ದೂರು

ಸಾಹಿತ್ಯದ ಗುಣಮಟ್ಟ ನೋಡಿ ಪ್ರಶಸ್ತಿ: ಮಾಲತಿ ಸಮರ್ಥನೆ
Last Updated 24 ಸೆಪ್ಟೆಂಬರ್ 2015, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಿಂದೂ ಧರ್ಮ ಕುರಿತು ಸಾಹಿತಿ ಕೆ.ಎಸ್‌. ಭಗವಾನ್‌ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಕೀಲ ಅಮೃತ್‌ ಜೋಯಿಷ್‌ ಇಲ್ಲಿನ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ಭಗವಾನ್‌ ಅವರು ನೀಡಿರುವುದನ್ನು ಮಾಧ್ಯಮದಲ್ಲಿ ಓದಿ ಆಘಾತವಾಯಿತು. ಅವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕಾಡೆಮಿ ಸಮರ್ಥನೆ
ಧಾರವಾಡ: 
‘ಕರ್ನಾಟಕ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರೊ. ಕೆ.ಎಸ್‌.ಭಗವಾನ್ ಅವರಿಗೆ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಚಿವರೊಬ್ಬರು ಅದನ್ನು ‘ಅಡ್ನಾಡಿ ಪ್ರಶಸ್ತಿ’ ಎಂದಿರುವುದನ್ನು ಅಕಾಡೆಮಿ ತೀವ್ರವಾಗಿ ಖಂಡಿಸುತ್ತದೆ’ ಎಂದು ಅಕಾಡೆಮಿ ಅಧ್ಯಕ್ಷೆ ಡಾ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

‘ಗೌರವ ಪ್ರಶಸ್ತಿಗಳನ್ನು ನೀಡುವಾಗ ಲೇಖಕರ ಸಾಹಿತ್ಯದ ಗುಣಮಟ್ಟ ಪರಿಗಣಿಸಲಾಗುತ್ತದೆಯೇ ಹೊರತು, ಅವರ ವೈಯಕ್ತಿಕ ಜೀವನವನ್ನಲ್ಲ ಎಂಬುದು ಮನಗಾಣಬೇಕು. ಪ್ರಶಸ್ತಿಗೆ ಆಯ್ಕೆಯಾಗಲಿರುವ ವ್ಯಕ್ತಿಯ ಸಾಹಿತ್ಯವನ್ನು ಸ್ವೀಕರಿಸುತ್ತೇವೆಯೇ ಹೊರತು, ಅವರ ವೈಯಕ್ತಿಕ ಜೀವನದಲ್ಲಿ ನೀಡಿರುವ ಹೇಳಿಕೆಗಳನ್ನು ಅಕಾಡೆಮಿ ಪುರಸ್ಕರಿಸುವುದಿಲ್ಲ’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

‘ಪ್ರೊ. ಭಗವಾನ್ ಅವರ ಹೆಸರನ್ನು ಅಂತಿಮಗೊಳಿಸುವ ಮುನ್ನ ರಾಜ್ಯದ 25 ಹಿರಿಯ ಸಾಹಿತಿಗಳ ಅಭಿಪ್ರಾಯ ಪಡೆಯಲಾಗಿತ್ತು. ಜತೆಗೆ ಪ್ರಶಸ್ತಿಗೆ ಅರ್ಹ ವ್ಯಕ್ತಿಯನ್ನು ಸೂಚಿಸುವಂತೆಯೂ ಅಕಾಡೆಮಿ ಕೇಳಿತ್ತು. ಎಚ್‌.ಎಸ್‌.ವೆಂಕಟೇಶಮೂರ್ತಿ ಹಾಗೂ ಓ.ಎಲ್‌.ನಾಗಭೂಷಣ ಹೆಸರುಗಳನ್ನೂ ಕೆಲವರು ಪ್ರಸ್ತಾಪಿಸಿದ್ದರು. ಆದರೆ ಅತಿ ಹೆಚ್ಚು ಜನರು ಭಗವಾನ್‌ ಅವರ ಸಾಹಿತ್ಯ ಕೃಷಿಗೆ ಪ್ರಶಸ್ತಿ ನೀಡುವಂತೆ ಕೇಳಿಕೊಂಡಿ ದ್ದರಿಂದ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಈ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷವಾಗಲಿ ಅಥವಾ ಸರ್ಕಾರ ಮಧ್ಯಪ್ರವೇಶಿಸಿಲ್ಲ’ ಎಂದು ಮಾಲತಿ ಸ್ಪಷ್ಟಪಡಿಸಿದರು.
*
ಶ್ರೀರಾಮ ಸೇನೆ ದೂರು
ಬೆಂಗಳೂರು:
ಶ್ರೀರಾಮ ಮತ್ತು ಶ್ರೀಕೃಷ್ಣನ ಬಗ್ಗೆ ಅವಹೇಳನಕಾರಿ ಮಾತನಾಡಿದ ಆರೋಪದ ಮೇಲೆ ವಿಚಾರವಾದಿ ಪ್ರೊ. ಭಗವಾನ್ ವಿರುದ್ಧ, ಶ್ರೀರಾಮ ಸೇನೆಯ ಬೆಂಗಳೂರು ನಗರ ಸಮಿತಿ ಸದಸ್ಯರು ಹೈಗ್ರೌಂಡ್ಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ. ಭಗವಾನ್ ಅವರ ವಿರುದ್ಧ ಈಗಾಗಲೇ ದೂರು ದಾಖಲಾಗಿರು ವುದರಿಂದ, ಮತ್ತೊಂದು ಎಫ್‍ಐಆರ್ ದಾಖಲಿಸುವ ಅಗತ್ಯವಿಲ್ಲ. ಹೀಗಾಗಿ, ಇದನ್ನೂ ಹಿಂದಿನ ಪ್ರಕರಣದೊಂದಿಗೆ ಸೇರಿಸಿ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT