ಗೋಣಿಕೊಪ್ಪಲು: ಕಾರ್ಮಿಕರ ಸಮಸ್ಯೆ ನಡುವೆಯೇ ಕೃಷಿ ಮಾಡಿದ್ದ ಭತ್ತದ ಫಸಲು ಇದೀಗ ಕೊಯ್ಲಿಗೆ ಬಂದಿದೆ. ಕೆಲವು ಕಡೆ ಇನ್ನು ಭತ್ತದ ಪೈರು ಹಸಿರಾಗಿದ್ದರೆ ಮತ್ತೆ ಕೆಲವು ಕಡೆ ಕಟಾವಿಗೆ ಬಂದಿದೆ. ಕೃಷಿಕರು ಕೊಯ್ಲಿನ ಯಂತ್ರ ಮತ್ತು ಕಾರ್ಮಿಕರ ಜೋಡಣೆಯಲ್ಲಿ ನಿರತರಾಗಿದ್ದಾರೆ.
ಆದರೆ ಬಹಳಷ್ಟು ಕಡೆ ಬೇಸಾಯ ಮಾಡದೇ ಇರುವುದರಿಂದ ಜಮೀನು ಪಾಳು ಬಿದ್ದಿದೆ. ರಸ್ತೆ ಬದಿಯ ಗದ್ದೆಗಳೆಲ್ಲ ಬಡಾವಣೆಗಳಾಗಿವೆ. ಉಳಿದ ಗದ್ದೆಗಳು ಕಾರ್ಮಿಕರ ಸಮಸ್ಯೆಯಿಂದ ದನ ಮೇಯುವ ಹುಲ್ಲುಗಾವಲಾಗಿವೆ. ಮತ್ತೆ ಕೆಲವು ಗದ್ದೆ ತಾಳೆಬೆಳೆ ಹಾಗೂ ಅಡಿಕೆ ಕೃಷಿಗೆ ಸೀಮಿತವಾಗಿದೆ.
ದಕ್ಷಿಣ ಕೊಡಗಿನಲ್ಲಿ ಒಂದು ಕಾಲದಲ್ಲಿ ಕಾಫಿ ತೋಟದಷ್ಟೆ ಪ್ರಮಾಣದಲ್ಲಿ ಭತ್ತದ ಗದ್ದೆಯೂ ಇತ್ತು. ಆದ್ದರಿಂದಲೇ ಈ ಭಾಗವನ್ನು ಭತ್ತದ ಕಣಜವೆಂದು ಕರೆಯುತ್ತಿದ್ದರು. ಈ ಕಣಜ ಅತಿಯಾದ ಕೃಷಿ ವೆಚ್ಚ, ಕಾರ್ಮಿಕರ ಸಮಸ್ಯೆಯಿಂದ ಕರಗುತ್ತಿದೆ. ಸಮೃದ್ಧಿಯಾಗಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಕೃಷಿ ಕಾಣದೆ ಬಿಕೋ ಎನ್ನಿಸುತ್ತಿವೆ.
ಭತ್ತಕ್ಕೆ ಬೆಲೆ ಕಡಿಮೆಯಾಗಿರುವುದೇ ಕೃಷಿ ಕೈಬಿಡಲು ಮತ್ತೊಂದು ಕಾರಣ. ಬೆಂಬಲ ಬೆಲೆ ನೀಡಿ ಆರ್ಎಂಸಿ ವತಿಯಿಂದ ಭತ್ತ ಖರೀದಿಸಬೇಕು ಎಂಬುದು ಕೃಷಿಕರ ಒತ್ತಾಯ. ಇಲ್ಲದಿದ್ದರೆ ಈಗ ಬೆಳೆದಿರುವ ಭತ್ತದ ಪ್ರಮಾಣವೂ ಕೂಡ ಮುಂದಿನ ವರ್ಷ ಲಭಿಸಲಾರದು. ವರ್ಷದಿಂದ ವರ್ಷಕ್ಕೆ ಕೃಷಿ ಕಡಿಮೆಯಾಗುತ್ತಲೇ ಸಾಗುತ್ತಿದೆ. ಸರ್ಕಾರ ಕೃಷಿಕರ ಬಗ್ಗೆ ಗಂಭೀರವಾಗಿ ಚಿಂತಿಸದಿದ್ದರೆ ಆಹಾರ ಸಮಸ್ಯೆ ತೀವ್ರವಾಗಲಿದೆ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.
ಕಡಿಮೆ ಬೆಲೆಯಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ, ಸಬ್ಸಿಡಿ ರೂಪದ ಸಾಲ ಸೌಲಭ್ಯ, ಭತ್ತಕ್ಕೆ ಉತ್ತಮ ಬೆಲೆ ನೀಡಿದರೆ ಮಾತ್ರ ಕೃಷಿ ಉಳಿಯಲಿದೆ ಎನ್ನುತ್ತಾರೆ ಕೃಷಿಕ ಕರುಂಬಯ್ಯ.