ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿ ಆಸ್ತಿಪಾಸ್ತಿ ರಕ್ಷಣೆಗೆ ಸಂಬಂಧಿಸಿದಂತೆ ಆಡಳಿತ ವರ್ಗ ನೀಡುತ್ತಿದ್ದ ಸಲಹೆ ಸೂಚನೆಗಳನ್ನು ಭದ್ರತಾ ಸಿಬ್ಬಂದಿ ಕಡೆಗಣಿಸುತ್ತಿದ್ದರು. ಇದರಿಂದಾಗಿ ಗಣಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.
ಗಣಿಯಲ್ಲಿ ನಡೆಯುತ್ತಿರುವ ಕಳ್ಳತನದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಡಳಿತ ವರ್ಗ ಹಲವಾರು ಬಾರಿ ಭದ್ರತಾ ಇಲಾಖೆಗೆ ಪತ್ರ ಬರೆದು, ಸೂಚನೆ ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿಯನ್ನು ಸಹ ನೀಡಿತ್ತು. ಆದರೂ ಭದ್ರತಾ ಸಿಬ್ಬಂದಿ ಅದನ್ನು ನಿರ್ಲಕ್ಷ್ಯ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕಳೆದ ಮೇ ತಿಂಗಳಿನಲ್ಲಿ ನಂದಿದುರ್ಗ ಮಿಲ್ನ ಬಾಲ್ ಮಿಲ್ ಸಬ್ಸ್ಟೇಷನ್ನಲ್ಲಿ ತಾಮ್ರದ ತಂತಿಗಳು ಕಳ್ಳತನವಾಗಿದ್ದವು. ಅದರ ಮೌಲ್ಯ ಸುಮಾರು ಹದಿನೈದು ಸಾವಿರ ರೂಪಾಯಿಗಳಾಗಿದ್ದವು. ಸದರಿ ಮಿಲ್ನಲ್ಲಿ ಭದ್ರತಾ ಸಿಬ್ಬಂದಿ ಹಗಲಿರಳು ಕಾವಲು ಕಾಯುತ್ತಿದ್ದರೂ ಕಳ್ಳರು ರಾಜಾರೋಷವಾಗಿ ಗಣಿಯೊಳಗೆ ಪ್ರವೇಶಿಸಿ ತಾಮ್ರದ ತಂತಿಗಳನ್ನು ಕದ್ದು ತೆಗೆದುಕೊಂಡು ಹೋಗಿದ್ದರು. ಈ ಸಂಬಂಧವಾಗಿ ತನಿಖೆ ನಡೆಸಿ ಪೊಲೀಸರಿಗೆ ದೂರು ನೀಡುವಂತೆ ಆಡಳಿತ ಮಂಡಳಿ ಸೂಚನೆ ಇದ್ದರೂ ಭದ್ರತಾ ಅಧಿಕಾರಿ ದೂರು ನೀಡಿರಲಿಲ್ಲ ಎಂದು ಹೇಳಲಾಗಿದೆ.
ಅದೇ ರೀತಿ ಕಳೆದ ಜುಲೈ ತಿಂಗಳಲ್ಲಿ ಹೆನ್ರೀಸ್ ವೈಂಡಿಂಗ್ ರೂಂನಲ್ಲಿ ಸಹ ಕಳ್ಳತನ ನಡೆದಿತ್ತು. ಗಣಿಯ ಇಡಿ ವಿಭಾಗದಲ್ಲಿ ನಡೆದ ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಗಣಿ ಗೋಡೆಯನ್ನು ನಾಶ ಮಾಡಿ ಕಳ್ಳತನ ಪ್ರಯತ್ನ ನಡೆಸಲಾಗಿತ್ತು. ಆದರೆ ಸದರಿ ಪ್ರಕರಣವನ್ನು ಪೊಲೀಸರಿಗೆ ತಿಳಿಸದೆ, ಭದ್ರತಾ ಸಿಬ್ಬಂದಿ ಗೋಡೆಯನ್ನು ಮರು ನಿರ್ಮಾಣ ಮಾಡಿದ್ದರು.
ಅದೇ ರೀತಿ ಎನ್ಡಿ ಮಿಲ್ನಲ್ಲಿ ಸಹ ಕಳ್ಳತನವಾಗುತ್ತಿತ್ತು. ಕಳ್ಳರನ್ನು ಪೊಲೀಸರೇ ಹಿಡಿಯಬೇಕಾಯಿತು. ಭದ್ರತಾ ಸಿಬ್ಬಂದಿ ಕರ್ತ್ಯವ್ಯದಿಂದ ವಿಮುಖರಾಗಿದ್ದಾರೆ. ದುಷ್ಕರ್ಮಿಗಳ ಜೊತೆ ಶಾಮೀಲಾಗಿರಬಹುದೆಂಬ ಶಂಕೆಯನ್ನು ಆಡಳಿತ ಮಂಡಳಿ ವ್ಯಕ್ತಪಡಿಸಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಪೊಲೀಸರಿಗೆ ದೂರು ನೀಡುವಂತೆ ಆಡಳಿತ ಮಂಡಳಿ ಸೂಚನೆ ನೀಡಿದ್ದರೂ ಅದನ್ನು ಸಹ ಭದ್ರತಾ ಸಿಬ್ಬಂದಿ ನಿರ್ಲಕ್ಷಿಸಿದ್ದರು ಎಂದು ‘ಪ್ರಜಾವಾಣಿ’ಗೆ ಲಭ್ಯವಾದ ಮಾಹಿತಿಯಲ್ಲಿ ತಿಳಿದುಬಂದಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.