ಬೆಂಗಳೂರು: ಭದ್ರಾ ಮತ್ತು ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿ ಹುಲಿ ಸಂರಕ್ಷಣೆ ಯೋಜನೆಗೆ ಇನ್ನಷ್ಟು ಪ್ರದೇಶಗಳನ್ನು ಸೇರಿಸುವುದಿಲ್ಲ. ಅರಣ್ಯ ಗಡಿಯನ್ನು ವಿಸ್ತರಿಸುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ಕುಮಾರ್ ಗುರುವಾರ ವಿಧಾನ ಸಭೆಯಲ್ಲಿ ತಿಳಿಸಿದರು.
ಶೂನ್ಯವೇಳೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಹುಲಿ ಸಂರಕ್ಷಣೆ ಯೋಜನೆಯಡಿ ಒಟ್ಟು 8 ವನ್ಯಧಾಮಗಳ ಗಡಿಗಳನ್ನು ವಿಸ್ತರಿಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಚಿಕ್ಕಮಗಳೂರು ಸೇರಿದಂತೆ ಕೆಲ ಭಾಗದ ಶಾಸಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭದ್ರಾ, ಕುದುರೆಮುಖ ವ್ಯಾಪ್ತಿಯಲ್ಲಿ ಇನ್ನಷ್ಟು ಪ್ರದೇಶವನ್ನು ಸ್ವಾಧೀನ ಪಡಿಸುವುದಿಲ್ಲ ಎಂದರು.
ಬನ್ನೇರುಘಟ್ಟ, ಮೂಕಾಂಬಿಕ, ಸೋಮೇಶ್ವರ, ಕಾವೇರಿ ಸೇರಿದಂತೆ ಆರು ವನ್ಯಧಾಮಗಳು ಹುಲಿ ಸಂರಕ್ಷಣೆ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ ಭದ್ರಾ ಅರಣ್ಯದ ಸುತ್ತ ಹೆಚ್ಚುವರಿ ಪ್ರದೇಗಳನ್ನು ಸೇರ್ಪಡೆ ಮಾಡುವುದರಿಂದ ಆ ಭಾಗದ ಜನರಿಗೆ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.