ಕಳಸ:ಇಲ್ಲಿಗೆ ಸಮೀಪದ ಹೆಬ್ಬಾಳೆಯ ಭದ್ರಾ ನದಿಯಲ್ಲಿ ಮುಳುಗಿ ಪ್ರವಾಸಿ ಯುವಕನೊಬ್ಬ ಸಾವಿಗೀಡಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಬೆಂಗಳೂರಿನ ಕಮಲಾನಗರದ 10 ಗೆಳೆಯರು ಟಾಟಾ ಸುಮೊ ವಾಹನದಲ್ಲಿ ಹೊರನಾಡು ಪ್ರವಾಸಕ್ಕೆ ಬಂದಿದ್ದರು. ಹೊರನಾಡು ಹಾದಿಯಲ್ಲಿ ಇರುವ ಭದ್ರಾ ನದಿಯಲ್ಲಿ ಶ್ರೀನಿವಾಸ (24) ನೀರಿಗೆ ಇಳಿದು ಆಡುತ್ತಿದ್ದಾಗ ಜಾರಿ ಬಿದ್ದರು ಎನ್ನಲಾಗಿದೆ.
ಅವರನ್ನ್ನು ಹಿಡಿಯಲು ಇನ್ನಿಬ್ಬರು ಸ್ನೇಹಿತರು ನೀರಿಗೆ ಇಳಿದಾಗ ಅವರು ಕೂಡ ಮುಳುಗಲಾರಂಭಿಸಿದರು. ಸ್ನೇಹಿತರು ಅವರಿಬ್ಬರನ್ನು ಬಿದಿರಿನ ಕೋಲಿನ ನೆರವಿನಿಂದ ಮೇಲಕ್ಕೆ ಎಳೆದರು. ಶ್ರೀನಿವಾಸ ಅಷ್ಟರಲ್ಲಿ ನೀರಿನಲ್ಲಿ ಮುಳುಗಿದ್ದರು ಎಂದು ಕಳಸ ಪೊಲೀಸರು ತಿಳಿಸಿದ್ದಾರೆ. ಬಾಳೆಹೊಳೆಯ ಮುಳುಗು ತಜ್ಞ ಭಾಸ್ಕರ್ ನದಿಯಲ್ಲಿ ಶೋಧ ನಡೆಸಿ ಶವ ಪತ್ತೆ ಮಾಡಿದರು.