ಚನ್ನಗಿರಿ: ಭದ್ರಾ ನಾಲೆ ನೀರನ್ನು ಬಳಸಿ ಬೇಸಿಗೆ ಹಂಗಾಮಿನಲ್ಲಿ ಬತ್ತ ಬೆಳೆಯಲು ಶೀಘ್ರ ನಾಲೆಗೆ ನೀರನ್ನು ಬಿಡಬೇಕೆಂದು ಬತ್ತದ ಬೆಳೆಗಾರರು ಒತ್ತಾಯಿಸಿದ್ದಾರೆ.
ಜನವರಿ ತಿಂಗಳ ಮೊದಲ ವಾರದಲ್ಲಿ ಭದ್ರಾ ಕಾಲುವೆಗೆ ನೀರನ್ನು ಬಿಡಲಾಗುತ್ತದೆ ಎಂದು ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಜನವರಿ ತಿಂಗಳ ಎರಡನೇ ವಾರ ಆರಂಭವಾದರೂ ಕೂಡಾ ಇನ್ನೂ ಕಾಲುವೆಗೆ ನೀರನ್ನು ಬಿಟ್ಟಿಲ್ಲ.
ಈಗಾಗಲೇ ಬತ್ತ ಬೆಳೆಯುವ ಪ್ರದೇಶಗಳಾದ ದೊಡ್ಡಮಲ್ಲಾಪುರ, ಆಲೂರು, ಬೆಳ್ಳಿಗನೂಡು, ಗೆದ್ದಲಹಟ್ಟಿ, ಮಂಗೇನಹಳ್ಳಿ, ಮೆದಿಕೆರೆ, ಉಪನಾಯಕನಹಳ್ಳಿ, ಮರಡಿ, ತಣಿಗೆರೆ, ಕೆಂಪನಹಳ್ಳಿ, ನಲ್ಕುದುರೆ, ಕಬ್ಬಳ, ದೊಡ್ಡಘಟ್ಟ, ನಾಗೇನಹಳ್ಳಿ, ತ್ಯಾವಣಿಗೆ, ಮೀಯಾಪುರ, ಕತ್ತಲಗೆರೆ, ಕಾರಿಗನೂರು, ಕಾಶೀಪುರ, ಕಾಶೀಪುರ ಕ್ಯಾಂಪ್, ವೆಂಕಟೇಶಪುರ, ಹಿರೇಕೋಗಲೂರು, ಸೋಮಲಾಪುರ, ಹಿರೇಮಳಲಿ, ಹರಸನಘಟ್ಟ, ಲಿಂಗದಹಳ್ಳಿ ಮುಂತಾದ ಗ್ರಾಮಗಳಲ್ಲಿ ಬತ್ತ ನಾಟಿಗಾಗಿ ಬತ್ತದ ಸಸಿಗಳು ಸಿದ್ಧವಾಗಿವೆ.
ಬೇಸಿಗೆ ಹಂಗಾಮಿನ ಬತ್ತ ನಾಟಿಗೆ ಈ ತಿಂಗಳು ಸಕಾಲ. ಆದ್ದರಿಂದ, ಮುಂದಿನ ನಾಲ್ಕೈದು ದಿನಗಳಲ್ಲಿ ಭದ್ರಾ ಕಾಲುವೆಗೆ ನೀರನ್ನು ಬಿಡಲು ನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕೆಂದು ಕಾಶೀಪುರ ಕ್ಯಾಂಪ್ನ ವೆಂಕಟೇಶ್, ರಂಗಾರೆಡ್ಡಿ ಹಾಗೂ ಹಲವಾರು ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ.