ಶಿವಮೊಗ್ಗ: ಕಾಂಗ್ರೆಸ್ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಭದ್ರಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಕೆ. ಸಂಗಮೇಶ್ ಅವರಿಗೆ ಬೆಂಬಲ ನೀಡಲು ಕೆಜೆಪಿ ನಿರ್ಧರಿಸಿದೆ.
ಕೆಜೆಪಿಯ ಅಧಿಕೃತ ಅಭ್ಯರ್ಥಿ ಕದಿರೇಶ್ ಶನಿವಾರ ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ಪಕ್ಷೇತರ ಅಭ್ಯರ್ಥಿ ಸಂಗಮೇಶ್ ಅವರಿಗೆ ಬೇಷರತ್ತು ಬೆಂಬಲ ನೀಡಿದರು.
ಕೆಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಗಮೇಶ್, `ಬಿ.ಎಸ್. ಯಡಿಯೂರಪ್ಪ ಕಷ್ಟಕಾಲದಲ್ಲಿ ನನ್ನ ನೆರವಿಗೆ ಬಂದಿದ್ದಾರೆ. ಇದು ನನ್ನಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಭದ್ರಾವತಿಯಲ್ಲಿ ನನ್ನ ಗೆಲುವು ನಿಶ್ಚಿತ. ಇನ್ನು ಮುಂದೆ ಕಾಂಗ್ರೆಸ್ ಸಹವಾಸ ಮಾಡಲು ಹೋಗುವುದಿಲ್ಲ. ನನ್ನ ಬೆಂಬಲ ಯಡಿಯೂರಪ್ಪ ಅವರಿಗೆ ಮಾತ್ರ' ಎಂದರು.
ಕದಿರೇಶ್ ಮಾತನಾಡಿ, `ಪಕ್ಷದ ಮುಖಂಡರ ಸೂಚನೆಯಂತೆ ನಾಮಪತ್ರ ಹಿಂದಕ್ಕೆ ಪಡೆದು ಸಂಗಮೇಶ್ ಪರವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ' ಎಂದು ತಿಳಿಸಿದರು.