ನವದೆಹಲಿ (ಪಿಟಿಐ): ದೆಹಲಿ ಪೋಲಿಸರು ಭಯೋತ್ಪಾದಕರೆಂದು ಗುರುತಿಸಿ ಬಂಧಿಸಿದ್ದ ಏಳು ಭಯೋತ್ಪಾದಕರನ್ನು ಅಮಾಯಕರೆಂದು ನಿರ್ಣಯಿಸಿ ಇಲ್ಲಿನ ಸ್ಥಳೀಯ ನ್ಯಾಯಾಲಯವು ಬುಧವಾರ ಬಿಡುಗಡೆ ಗೊಳಿಸಿದೆ. ಇದರಿಂದ ದೆಹಲಿ ಪೋಲಿಸರಿಗೆ ಮುಖಭಂಗವಾದಂತಾಗಿದೆ.
ದೆಹಲಿ ಪೋಲಿಸರು ತಮ್ಮ ಕಚೇರಿಯಲ್ಲಿದ್ದುಕೊಂಡು ‘ನಕಲಿ ಎನ್ಕೌಂಟರ್’ ಕಥೆಯನ್ನು ಹೆಣೆದು ಅಮಾಯಕ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಗುರುತಿಸಿ ಬಂಧಿಸುತ್ತಿದ್ದಾರೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಧೀಶ ವೀರೇಂದರ್ ಭಟ್ ಬಂಧಿತರನ್ನು ಆರೋಪಮುಕ್ತರನ್ನಾಗಿ ಮಾಡುತ್ತಾ ಹೇಳಿದರು.
ಸಾಖಿಬ್ ರೆಹಮಾನ್, ಬಷೀರ್ ಅಹಮದ್ ಷಾ, ನಾಜೀರ್ ಅಹಮದ್ ಶಫಿ, ಮೊಹಿನುದ್ದೀನ್ ದಾರ್, ಅಬ್ದುಲ್ ಮಜೀದ್ ಬಟ್, ಅಬ್ದುಲ್ ಖಯೂಮ್ ಖಾನ್ ಮತ್ತು ಬೀರೇಂದರ್ ಕುಮಾರ್ ಸಿಂಗ್ ಇವರನ್ನು ದೆಹಲಿ ಪೋಲಿಸರು ಭಯೋತ್ಪಾದಕರೆಂದು ಗುರುತಿಸಿ 2005ರ ಜುಲೈ ತಿಂಗಳಲ್ಲಿ ಬಂಧಿಸಿದ್ದರು.