ಬೆಂಗಳೂರು: `ಸಮಾಜದಲ್ಲಿ ಭಯೋತ್ಪಾದನೆ ಬೇಡ. ದಯೋತ್ಪಾದನೆಯ ಮೂಲಕ ನಾವೆಲ್ಲ ವಿಶ್ವ ಕಲ್ಯಾಣದ ಕೆಲಸ ಮಾಡಬೇಕು' ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಕರ್ನಾಟಕ ಜೀವನ್ ವಿಜ್ಞಾನ್ ಅಕಾಡೆಮಿಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನ, ಆಚಾರ್ಯ ಮಹಾಪ್ರಜ್ಞಾಜಿ ಅವರ 94ನೇ ಜನ್ಮದಿನಾಚರಣೆ ಹಾಗೂ ಪ್ರಜ್ಞಾ ದಿವಸ್ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
`ಎಲ್ಲ ಧರ್ಮಗಳು ಸತ್ಯಾನ್ವೇಷಣೆ ಹಾಗೂ ಲೋಕ ಕಲ್ಯಾಣದ ಧ್ಯೇಯೋದ್ದೇಶ ಹೊಂದಿವೆ. ಎಲ್ಲರ ಗುರಿಯೂ ಒಂದೇ. ಜೈನ ಧರ್ಮ ಹಾಗೂ ಹಿಂದೂ ಧರ್ಮದಲ್ಲಿ ಸಾಕಷ್ಟು ಸಾಮ್ಯತೆ ಇದೆ. ಎರಡೂ ಧರ್ಮಗಳ ನಡುವೆ ಪರಸ್ಪರ ಸಾಂಸ್ಕೃತಿಕ ಸಂಬಂಧ, ಅನೋನ್ಯತೆ ಇದೆ. ಜೈನ ಧರ್ಮದ ಪ್ರಭಾವ ವೈದಿಕ ಧರ್ಮದ ಮೇಲಾಗಿದೆ. ಹಾಗೆಯೇ ವೈದಿಕ ಧರ್ಮದ ಭಕ್ತಿ ಭಾವದ ಪ್ರಭಾವ ಜೈನ ಧರ್ಮದ ಮೇಲಾಗಿದೆ' ಎಂದು ಅವರು ವಿಶ್ಲೇಷಿಸಿದರು. ಉದ್ಘಾಟನೆ ನೆರವೇರಿಸಿದ ಆಹಾರ ಸಚಿವ ದಿನೇಶ್ ಗುಂಡೂರಾವ್, `ವ್ಯಕ್ತಿಗಳು ತಪ್ಪು ದಾರಿಗೆ ಹೋಗದಂತೆ ಧರ್ಮಗಳು ಪ್ರೇರಣೆ ನೀಡುತ್ತವೆ. ಧರ್ಮಗಳ ನಡುವೆ ನಾವೇ ವ್ಯತ್ಯಾಸವನ್ನು ಸೃಷ್ಟಿಸಿದ್ದೇವೆ. ಸಮಾಜದಲ್ಲಿ ಹಿಂಸಾತ್ಮಕ ಮನೋಭಾವ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಅಗತ್ಯ' ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೌಮ್ಯಾನಂದ ಸ್ವಾಮೀಜಿ, ರಂಗಕರ್ಮಿ ಬಿ.ವಿ. ರಾಜಾರಾಂ ಮತ್ತಿತರರು ಹಾಜರಿದ್ದರು.