ರಿಪ್ಪನ್ಪೇಟೆ: ದೇಶದ ಪಿಡುಗಾಗಿರುವ ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಅವುಗಳನ್ನು ತೊಲಗಿಸುವ ನಿಟ್ಟಿನಲ್ಲಿ ಪ್ರತಿ ಒಬ್ಬ ಪ್ರಜೆಯೂ ಜಾಗೃತಗೊಳ್ಳಬೇಕು ಎಂದು ಯುವ ಮುಖಂಡ ಜಿ.ಎಸ್. ರಾಘವೇಂದ್ರ ಹೇಳಿದರು.
ಜನಲೋಕಪಾಲ ಮಸೂದೆ ಜಾರಿಗೆ ತರುವಲ್ಲಿ ಮೀನ -ಮೇಷ ಎಣಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಇಲ್ಲಿನ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ವಿನಾಯಕ ವೃತ್ತದಲ್ಲಿ ಗುರುವಾರ ನಡೆದ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿ ಮನೆಗೊಬ್ಬ ಅಣ್ಣಾ ಹಜಾರೆ ಹುಟ್ಟಿದಲ್ಲಿ ಮಾತ್ರ ಈ ಪಿಡುಗು ಹೋಗಲಾಡಿಸಲು ಸಾಧ್ಯ ಎಂದು ಜನ ಜಾಗೃತಿ ಹೋರಾಟ ಸಮಿತಿ ಅಧ್ಯಕ್ಷ ಟಿ.ಆರ್. ಕೃಷ್ಣಪ್ಪ ಹೇಳಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹಾಲಕ್ಷ್ಮೀ ಅಣ್ಣಪ್ಪ, ಜನತಾ ದಳ ಮುಖಂಡ ಆರ್.ಎ. ಚಾಬುಸಾಬು, ಎನ್. ವರ್ತೇಶ, ಬಾಪೂಜಿ ಅಟೋರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಗೌರವಾಧ್ಯಕ್ಷ ಎಲ್. ವೆಂಕಟೇಶ ಮಾತನಾಡಿದರು.
ಬಾಪೂಜಿ ಅಟೋ ರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪುರುಷೋತ್ತಮ, ದೇವಪ್ಪ ಗೌಡ, ಪ್ರಶಾಂತ, ಸುರೇಶ, ಗುರು, ಮಂಜುನಾಥ, ಲೋಕೇಶ ಇತರರು ಹಾಜರಿದ್ದರು.ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಸುರೇಶ ಅವರಿಗೆ ಮನವಿ ಸಲ್ಲಿಸಲಾಯಿತು.