ಕುಂದಾಪುರ: `ಜನರಿಗೆ ಅನೂಕೂಲಕರ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡುವ ಬದಲು, ಯೋಜನೆಯ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು~ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದರು.
ಇಲ್ಲಿಗೆ ಸಮೀಪದ ಹೆಮ್ಮಾಡಿಯ ಕನ್ನಡಕುದ್ರುವಿಗೆ ಭಾನುವಾರ ಭೇಟಿ ನೀಡಿದ ಅವರು ಸೇತುವೆ ನಿರ್ಮಾಣದ ಕುರಿತು ಸ್ಥಳೀಯರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
`ಸೇತುವೆ ನಿರ್ಮಿಸುತ್ತೇನೆ ಎಂದು ಭರವಸೆ ನೀಡುವುದರಲ್ಲಿ ಅರ್ಥವಿಲ್ಲ. ಕನ್ನಡಕುದ್ರುವಿಗೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಿಸುವಂತೆ ಸ್ಥಳೀಯ ಶಾಸಕರು ಮಾಡಿದ ಮನವಿಯನ್ನು ಪುರಸ್ಕರಿಸಿದ್ದೇನೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಲ್ಲಿ ಈ ಉದ್ದೇಶಕ್ಕಾಗಿ 5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸೇತುವೆ ನಿರ್ಮಾಣದ ಬಳಿಕಷ್ಟೆ ತಾನು ಇಲ್ಲಿಯ ಜನರನ್ನು ಉದ್ದೇಶಿಸಿ ಮಾತನಾಡುತ್ತೇನೆ~ ಎಂದರು.
`ಸಂಪರ್ಕ ಸೇತುವೆ ಇಲ್ಲದೆ ಈ ಭಾಗದ ಜನ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ನಾಗರಿಕ ಸಮಾಜದ ಸಂಪರ್ಕವಿಲ್ಲದೆ ಜನತೆ ದ್ವೀಪವಾಸಿಗಳಾಗಿಯೇ ಮುಂದು ವರಿದಿದ್ದಾರೆ~ ಎಂದು ಬೈಂದೂರು ಶಾಸಕ ಕೆ.ಲಕ್ಷ್ಮಿನಾರಾಯಣ ಅವರು ಸಚಿವರ ಗಮನಕ್ಕೆ ತಂದರು.
ಅಂಗವಿಕಲ ವಿದ್ಯಾರ್ಥಿನಿ ಹಾಗೂ ರಾಜ್ಯ ಮಟ್ಟದ ಕ್ರೀಡಾಪಟು ರಮ್ಯಾ ಪೂಜಾರಿ ಅವರನ್ನು ಸಚಿವರು ಗೌರವಿಸಿದರು.
ಸದಾಶಿವ ಡಿ.ಪಡುವರಿ, ಸುಮತಿ ಮೊಗವೀರ, ಭಾಸ್ಕರ ಮೊಗವೀರ, ಕಿರಣ್ ಕ್ರಾಸ್ತಾ, ಕೂಕನಾಡು ಸೋಮಶೇಖರ ಶೆಟ್ಟಿ, ಮಂಜು ನಾಯ್ಕ ತ್ರಾಸಿ ಇದ್ದರು.