ಜಿಲ್ಲೆಯ ವಿವಿಧೆಡೆ ಸತತ 2 ಗಂಟೆ ಸುರಿದ ಮಳೆ
ಶಿವಮೊಗ್ಗ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ 4ರಿಂದ ಸತತವಾಗಿ 2 ಗಂಟೆಗಳ ಕಾಲ ಮಳೆ ಸುರಿಯಿತು.
ಅಬ್ಬರಿಸಿದ ಮಳೆಯಿಂದ ಸಂಚಾರ ಕೆಲವು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತು. ಮಳೆಯಲ್ಲಿ ಕಾರ್ಮಿಕರು ಮನೆಗೆ ತೆರಳಲು ಪರದಾಡಿದರು. ಕೆಲವು ದಿನಗಳಿಂದ ಮಾಯವಾಗಿದ್ದ ಮಳೆರಾಯ ಮತ್ತೆ ಆಗಮಿಸಿದ್ದು, ರೈತಾಪಿ ವರ್ಗದಲ್ಲಿ ಹರ್ಷ ಮೂಡಿಸಿದೆ.
ಹೊಲದ ಬೆಳೆಗಳಿಗೆ ಮಳೆ ಅಗತ್ಯವಾಗಿತ್ತು. ಈಗ ಮಳೆರಾಯ ಕೃಪೆ ತೋರಿದ್ದು, ಬೆಳೆಗಳಿಗೆ ಅನುಕೂಲವಾಗಿದೆ.
ರಿಪ್ಪನ್ಪೇಟೆಯಲ್ಲೂ ಉತ್ತಮವಾಗಿ ಮಳೆ ಸುರಿದಿದೆ. ಸಾಗರ ಮತ್ತು ಹೊಸನಗರದಲ್ಲೂ ಮಳೆ ಆಗಿದೆ.
ಭಾನುವಾರ ಬೆಳಿಗ್ಗೆ 8ಕ್ಕೆ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1,808 ಅಡಿ (ಗರಿಷ್ಠ 1,819 ಅಡಿ). ಒಳಹರಿವು 4,341 ಕ್ಯೂಸೆಕ್. ಹೊರಹರಿವು 4,203 ಕ್ಯೂಸೆಕ್ ಇತ್ತು.
ಹಾಗೆಯೇ, ಭದ್ರಾ ಜಲಾಶಯದ ನೀರಿನಮಟ್ಟ 172.10 ಅಡಿ (ಗರಿಷ್ಠಮಟ್ಟ 186 ಅಡಿ). ಒಳಹರಿವು 1,339 ಕ್ಯೂಸೆಕ್. ಹೊರಹರಿವು 3,191 ಕ್ಯೂಸೆಕ್ ಇತ್ತು ಅಧಿಕಾರಿಗಳು ತಿಳಿಸಿದ್ದಾರೆ.