ರಾಯಚೂರು: ಜಗತ್ತು ಗೌರವಿಸುವಂಥ ಸರಳ ಸಜ್ಜನಿಕೆಯ ರಾಜಕಾರಣಿ ಉತ್ತಮ ವಾಗ್ಮಿಯಾಗಿ ಭಾರತ ದೇಶದ ಅಭಿವೃದ್ಧಿಗಾಗಿ ಉಜ್ಜಲ ಭವಿಷ್ಯ ರೂಪಿಸಿದ ಮಹಾನ್ವ್ಯಕ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು ಹೇಳಿದರು.
ಇಲ್ಲಿನ ಕನಕದಾಸ ಶಿಕ್ಷಣ ಸಂಸ್ಥೆಯ ಅನಾಥ ಮಕ್ಕಳ ವಸತಿ ಶಾಲೆಯಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ಅವರ 89ನೇ ಜನ್ಮದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ವಾಜಪೇಯಿ ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಚತುಷ್ಪಥ ರಸ್ತೆಗಳು, ಪ್ರಧಾನಮಂತ್ರಿ ಸಡಕ್ ಯೋಜನೆ, ಶಿಕ್ಷಣ ಅಭಿಯಾನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅವರ ತತ್ವ ಆದರ್ಶಗಳನ್ನು ಕಾರ್ಯಕರ್ತರು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಪಕ್ಷದ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಆರ್.ತಿಮ್ಮಯ್ಯ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅನಾಥ ಮಕ್ಕಳ ವಸತಿ ಶಾಲೆಯಲ್ಲಿ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಅವರು ರೂಪಿಸಿದ ಅನೇಕ ಯೋಜನೆಗಳು ಇಂದು ಕಾರ್ಯರೂಪಕ್ಕೆ ಬಂದಿವೆ. ದೇಶ ಕಂಡ ಮಹಾನ್ ಅಜಾತ ಶತ್ರು ಎಂದು ಹೇಳಿದರು.
ಅನಾಥ ವಸತಿ ಶಾಲೆಯ ಮಕ್ಕಳಿಗೆ ಸಿಹಿ ಹಂಚಿಕೆ ಮಾಡಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ. ಶೇಖರರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಅಮರೇಶ ಹೊಸಮನಿ, ಆರ್ಡಿಎ ಅಧ್ಯಕ್ಷ ರಾಜಕುಮಾರ, ಎಪಿಎಂಸಿ ಉಪಾಧ್ಯಕ್ಷ ಬಾಬುರಾವ್, ನಗರಸಭೆ ಸದಸ್ಯರಾದ ಎನ್.ಶ್ರೀನಿವಾಸರೆಡ್ಡಿ, ಟಿ.ಮಲ್ಲೇಶ, ಟಿ.ಶ್ರೀನಿವಾಸರೆಡ್ಡಿ, ಕೆ.ನಲ್ಲಾರೆಡ್ಡಿ, ಎಪಿಎಂಸಿ ಮಾಜಿ ನಿರ್ದೇಶಕ ಶಶಿಧರ ಏಗನೂರು,ಆರ್ಡಿಎ ಮಾಜಿ ಅಧ್ಯಕ್ಷ ಬಿ. ಗೋವಿಂದಯ್ಯ, ಮುಖಂಡರಾದ ಬಿ.ಗಿರೆಣ್ಣ, ಎನ್.ಲಾಲಪ್ಪ, ಕೆ.ರವಿ, ಜಂಪಾರೆಡ್ಡಿ, ನಾರಾಯಣರಾವ್ ಕುಲಕರ್ಣಿ, ಗಿರೀಶ ಕನಕವೀಡು, ರಮಾನಂದ ಯಾದವ್, ಶರಣಮ್ಮ ಕಾಮರೆಡ್ಡಿ, ಶಶಿಕಲಾ ಭೀಮರಾಯ, ಸುಶೀಲಾ ಬಿ ಗಣೇಶ, ಶೀಲಾ ಜಹಾಗೀರದಾರ ಹಾಗೂ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.