ನವದೆಹಲಿ (ಪಿಟಿಐ): ಬಡ್ಡಿದರ ನಿಗದಿ ಕುರಿತಂತೆ `ನೌಕರರ ಭವಿಷ್ಯ ನಿಧಿ ಸಂಘಟನೆ~ಯು ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದರಿಂದ ಅಸಮಾಧಾನಗೊಂಡಿರುವ `ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ~(ಎಐಟಿಯುಸಿ), 2012-13ನೇ ಸಾಲಿನ ಬಡ್ಡಿದರ ನಿಗದಿ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
2012-13ನೇ ಹಣಕಾಸು ವರ್ಷದಲ್ಲಿ ಈಗಾಗಲೇ ಆರೂವರೆ ತಿಂಗಳೇ ಕಳೆದಿದ್ದರೂ ಈ ಸಾಲಿನ ಬಡ್ಡಿದರ ಕುರಿತು ಯಾವುದೇ ನಿರ್ಧಾರವಾಗಿಲ್ಲ. ಅಲ್ಲದೆ, ಈವರೆಗೂ `ಇಪಿಎಫ್ ಟ್ರಸ್ಟಿಗಳ ಮಂಡಳಿ~ ಸಭೆಯಲ್ಲಿ ಈ ವಿಚಾರ ಚರ್ಚೆಗೇ ಬಂದಿಲ್ಲ. ಹಾಗಾಗಿ ಈ ವರ್ಷಕ್ಕೂ 2011-12ನೇ ಸಾಲಿನಂತೆ ಶೇ 8.25ರ ಬಡ್ಡಿದರವೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗುರುದಾಸ್ ಗುಪ್ತ ಕಳವಳ ವ್ಯಕ್ತಪಡಿಸಿದ್ದಾರೆ.