ಗಡಿ ಚರ್ಚೆಗೆ ಚೀಣಾ ಕರೆ
ಪೀಕಿಂಗ್, ಅ. 6 - `ತಮ್ಮ ನಡುವಣ ಗಡಿ ವಿವಾದದ ಬಗ್ಗೆ ಇದೇ 15 ರಂದು ಭಾರತದ ಪ್ರತಿನಿಧಿಯೊಬ್ಬರೊಡನೆ ಪೀಕಿಂಗ್ನಲ್ಲಿ ಮಾತುಕತೆ ನಡೆಸಲು ತಾನು ಸಿದ್ಧವಾಗಿರುವುದಾಗಿ ಚೀಣವು ಭಾರತಕ್ಕೆ ತಿಳಿಸಿದೆ~ ಎಂದು ನವಚೀಣ ವಾರ್ತಾ ಸಂಸ್ಥೆ ಇಂದು ವರದಿ ಮಾಡಿದೆ.
ಅಕ್ಟೋಬರ್ 3 ರಂದು ಚೀಣದ ಸರ್ಕಾರವು ಭಾರತದ ಸರ್ಕಾರಕ್ಕೆ ಬರೆದ ಪತ್ರವೊಂದರಲ್ಲಿ ಈ ಅಂಶವನ್ನು ತಿಳಿಸಿದೆಯೆಂದೂ, ಮಾತುಕತೆಗೆ ಮುಂಚೆ ಭಾರತವು ಹಾಕಿರುವ ಷರತ್ತುಗಳನ್ನು ಚೀಣವು ಪಾಲಿಸಬೇಕೆಂಬ ಭಾರತ ಸರ್ಕಾರದ ನಿಲುವನ್ನು `ಅಸಮರ್ಥನೀಯ~ ಎಂದು ತಿರಸ್ಕರಿಸಿದೆಯೆಂದೂ ಈ ವರದಿ ತಿಳಿಸಿದೆ.
ಈ ಪತ್ರವನ್ನು ಇಂದು ಪ್ರಕಟಿಸಲಾಗಿದೆ.
ಮಹಾರಾಷ್ಟ್ರದ ರಾಜ್ಯಪಾಲ ಡಾ. ಪಿ. ಸುಬ್ಬರಾಯನ್ ನಿಧನ
ಮದರಾಸ್, ಅ. 6 - ಹಿರಿಯ ಕಾಂಗ್ರೆಸ್ಸಿಗರೂ, ಕ್ರೀಡಾಪಟುಗಳೂ ಆಗಿದ್ದ ಮಹಾರಾಷ್ಟ್ರದ ರಾಜ್ಯಪಾಲರಾದ ಡಾ. ಪಿ. ಸುಬ್ಬರಾಯನ್ರವರು ಇಂದು ಬೆಳಿಗ್ಗೆ ಮದರಾಸಿನ ಜನರಲ್ ಆಸ್ಪತ್ರೆಯಲ್ಲಿ ವಿಧಿವಶರಾದರೆಂದು ವರದಿ ಮಾಡಲು ವಿಷಾದವಾಗುತ್ತದೆ. ದಿವಂಗತರಿಗೆ 73 ವರ್ಷ ವಯಸ್ಸಾಗಿತ್ತು.
ನವೆಂಬರ್ 1ರಂದು ಕೋಲಾರದ ಚಿನ್ನದ ಗಣಿ ಕೇಂದ್ರದ ವಶಕ್ಕೆ?
ನವದೆಹಲಿ, ಅ. 6 - ಪರಿಹಾರ ನೀಡಿಕೆ ಪ್ರಶ್ನೆಯನ್ನು ಇತ್ಯರ್ಥವಾಗುವುದಕ್ಕೆ ಬಿಟ್ಟು, ಕೋಲಾರದ ಚಿನ್ನದ ಗಣಿಯನ್ನು ಕೇಂದ್ರ ಹಣಕಾಸು ಸಚಿವ ಶಾಖೆಯು ನವೆಂಬರ್ 1 ರಂದು ಮೈಸೂರು ಸರ್ಕಾರದಿಂದ ವಹಿಸಿಕೊಳ್ಳುವ ಸಂಭವವಿದೆ.
ಈ ವಿಚಾರವನ್ನು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ತಿಳಿಸಿದ್ದು ಉತ್ತರಕ್ಕಾಗಿ ಎದುರು ನೋಡಲಾಗುತ್ತಿದೆಯೆಂದು ವರದಿಯಾಗಿದೆ. ಮೈಸೂರು ಸರ್ಕಾರದ ಉತ್ತರ ಬಂದ ಬಳಿಕ ಈ ಬಗ್ಗೆ ಆಖೈರು ನಿರ್ಧಾರ ಕೈಗೊಳ್ಳಲಾಗುತ್ತದೆ.
ಮೈಸೂರು ಸರ್ಕಾರಕ್ಕೆ ನಿಡಬೇಕಾದ ಪರಿಹಾರ ಪ್ರಮಾಣವನ್ನು ನಾಲ್ಕು ಕೋಟಿ ರೂಪಾಯಿಗಳೆಂದು ಕೇಂದ್ರ ಸರ್ಕಾರದ ಲೆಕ್ಕ ತಜ್ಞರು ಅಂದಾಜು ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರವು ಆರು ಕೋಟಿ ರೂಪಾಯಿ ಪರಿಹಾರವನ್ನು ಕೇಳಿದೆ.
ಅಮೆರಿಕಾಕ್ಕೆ ಮೈಸೂರಿನ `ದಿಲೀಪ್~
ಬೆಂಗಳೂರು, ಅ. 6 - `ಭಾರತ ಅಮೆರಿಕ ಜನತೆಯ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ನಿಕಟಗೊಳಿಸಲಿರುವ ಮೈಸೂರಿನ ಹೆಮ್ಮೆಯ ಪುತ್ರ~ ದಿಲೀಪನನ್ನು ಅಮೆರಿಕದ ಸಂಸ್ಥೆಯೊಂದಕ್ಕೆ ಇಂದು ಇಲ್ಲಿ ಕೊಡುಗೆಯಾಗಿ ನೀಡಲಾಯಿತು.
ಇರಾನಿನಲ್ಲಿ ಭೂಕಂಪ; ಅಪಾರ ಪ್ರಾಣಹಾನಿ
ಟೆಹರನ್, ಅ. 6 - ಇಲ್ಲಿಗೆ 450 ಮೈಲಿಗಳ ದೂರದಲ್ಲಿನ ಗ್ರಾಮವೊಂದರಲ್ಲಿ ಕಳೆದ ರಾತ್ರಿ ತೀವ್ರ ಭೂಕಂಪವಾಯಿತೆಂದು ಇಲ್ಲಿಗೆ ವರದಿಗಳು ಬಂದಿವೆ. ಇದರಿಂದ ಅಪಾರ ಪ್ರಾಣ ಹಾನಿ, ಸ್ವತ್ತಿಗೆ ಜಖಂ ಆಗಿದೆ. ಇದೇ ಪ್ರದೇಶದ ಟೊರ್ಬಾಟ್ ಹೇಂಟರಿಯ ನಗರದಲ್ಲಿ ಭೂಕಂಪವಾದರೂ ಸ್ವತ್ತಿನ ಹಾನಿ, ಪ್ರಾಣ ಹಾನಿಯಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.