ಥಿಂಪು, ಭೂತಾನ್ (ಪಿಟಿಐ): ಬಗೆಹರಿಯದೇ ಉಳಿದಿರುವ ವಿಷಯ ಕುರಿತು ಭಾರತ-ಪಾಕ್ ನಡುವೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಮಾತುಕತೆ ಸಂದರ್ಭದಲ್ಲಿ ಏಕಪಕ್ಷೀಯ ಅನುಕೂಲ ಪಡೆಯುವುದಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಪಾಕಿಸ್ತಾನ ಹೇಳಿದೆ.ಭಯೋತ್ಪಾದನೆ, ಜಮ್ಮು ಮತ್ತು ಕಾಶ್ಮೀರ ಮತ್ತು ಸಿಯಾಚಿನ್ ಸೇರಿದಂತೆ ವಿವಿಧ ವಿಷಯಗಳು ಮಾತುಕತೆ ಸಂದರ್ಭದಲ್ಲಿ ಚರ್ಚೆಯಾಗಲಿವೆ ಎಂದು ಭಾರತ ಹೇಳಿದ ಮರುಕ್ಷಣದಲ್ಲಿ ಪಾಕಿಸ್ತಾನ ಈ ಹೇಳಿಕೆ ನೀಡಿದೆ.ಮಾತುಕತೆ ಸಂದರ್ಭದಲ್ಲಿ ಎರಡೂ ದೇಶಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದು, ‘ಸರಿಯಾದ ವಾತಾವರಣ ನಿರ್ಮಿಸುವ ಅಗತ್ಯ ಇದೆ’ ಎಂದಿದ್ದಾರೆ.
ಗೊಂದಲಮಯ ವಾತಾವರಣವನ್ನು ತಿಳಿಗೊಳಿಸಿ ದ್ವಿಪಕ್ಷೀಯ ಮಾತುಕತೆಗೆ ಉತ್ತಮ ಪರಿಸ್ಥಿತಿಯನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಇದುವರೆಗೆ ಯಶಸ್ವಿಯಾಗಿದ್ದೇವೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಜತೆ ನಡೆಸಿದ ಮಾತುಕತೆಯನ್ನು ಸ್ಮರಿಸಿದರು.ಬಗೆಹರಿಯದ ವಿಷಯ ಕುರಿತು ಚರ್ಚಿಸಲು ವಿದೇಶಾಂಗ ಸಚಿವ ಷಾ ಮಹ್ಮದ್ ಖುರೇಷಿ ಅವರು ನವದೆಹಲಿಗೆ ಭೇಟಿ ನೀಡುವ ಮುನ್ನವೇ ಉಭಯ ದೇಶಗಳೂ ಹಲವು ಸುತ್ತಿನ ಮಾತುಕತೆಗೆ ಸಮ್ಮತಿಸಿವೆ ಎಂದರು.