ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ- ಪಾಕ್ ಸೆಮಿಫೈನಲ್ ಮರೆಯಲು ಸಾಧ್ಯವಿಲ್ಲ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯ ನನ್ನ ವೃತ್ತಿಜೀವನದ `ಅತ್ಯಂತ ರೋಚಕ ಪಂದ್ಯ~ ಎಂದು ಆಸ್ಟ್ರೇಲಿಯದ ಅಂಪೈರ್ ಸೈಮನ್ ಟಫೆಲ್ ಬಣ್ಣಿಸಿದ್ದಾರೆ.

ಭಾನುವಾರ ನಡೆಯುವ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಸೈಮನ್ ಟಫೆಲ್ ಅವರಿಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಎನಿಸಿಕೊಂಡಿದೆ. ಬಳಿಕ ಅವರು ಐಸಿಸಿ ಅಂಪೈರ್‌ಗಳ `ಹೈ ಪರ್ಫಾಮೆನ್ಸ್ ಮ್ಯಾನೇಜರ್~ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಟಫೆಲ್ ತಮ್ಮ ಅಂಪೈರಿಂಗ್ ವೃತ್ತಿಯ ಅನುಭವಗಳನ್ನು ಬಿಚ್ಚಿಟ್ಟರು. `ಇದುವರೆಗಿನ ಹಾದಿಯನ್ನೊಮ್ಮೆ ನೋಡಿದರೆ ಹಲವು ಸ್ಮರಣೀಯ ಅನುಭವಗಳನ್ನು ಕಾಣಬಹುದು. 2011 ರಲ್ಲಿ ಮೊಹಾಲಿಯಲ್ಲಿ ನಡೆದ ಭಾರತ- ಪಾಕಿಸ್ತಾನ              ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಅದರಲ್ಲಿ ಪ್ರಮುಖವಾದದು~ ಎಂದು ಹೇಳಿದರು.

`ಆ ಪಂದ್ಯ ವೀಕ್ಷಿಸಲು ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಆಗಮಿಸಿದ್ದರು. ಅದು ಕೇವಲ ಕ್ರಿಕೆಟ್ ಪಂದ್ಯ ಮಾತ್ರ ಆಗಿರಲಿಲ್ಲ. ನನ್ನ ಪ್ರಕಾರ 2011ರ ವಿಶ್ವಕಪ್ ಟೂರ್ನಿಯಲ್ಲಿ ಎರಡು ಫೈನಲ್ ಪಂದ್ಯಗಳಿದ್ದವು.

ಭಾರತ- ಪಾಕ್ ನಡುವಿನ ನಾಲ್ಕರಘಟ್ಟದ ಹೋರಾಟಕ್ಕೂ ಫೈನಲ್ ಪಂದ್ಯದ ಕಳೆ ಬಂದಿತ್ತು~ ಎಂದು ನುಡಿದರು. ಈ ಪಂದ್ಯದಲ್ಲಿ ಟಫೆಲ್ ಹಾಗೂ ಇಂಗ್ಲೆಂಡ್‌ನ ಇಯಾನ್  ಗೌಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

ಭಾರತ ಮತ್ತು ಇಂಗ್ಲೆಂಡ್ ನಡುವೆ ಮುಂಬೈನಲ್ಲಿ ನಡೆದ ಟೆಸ್ಟ್ ಜೀವನದ `ಅತ್ಯಂತ ಕಠಿಣ~ ಪಂದ್ಯವಾಗಿತ್ತು ಎಂದು ಅವರು ಹೇಳಿದರು. `ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಈ ಕಾರಣ ಪಂದ್ಯದಲ್ಲಿ ಕಾರ್ಯನಿರ್ವಹಿಸಲು ಸಾಕಷ್ಟು ಪ್ರಯಾಸಪಟ್ಟೆ. ಆ ಟೆಸ್ಟ್ ದೈಹಿಕ ಹಾಗೂ ಮಾನಸಿಕವಾಗಿ ಸವಾಲಿನಿಂದ ಕೂಡಿದ್ದಾಗಿತ್ತು~ ಎಂದರು.

ಅಂತರರಾಷ್ಟ್ರೀಯ ಅಂಪೈರ್ ಸಾಕಷ್ಟು ಸವಾಲುಗಳನ್ನು ಎದುರಿಸಬೇಕು ಎಂದ ಟಫೆಲ್, ಕೆಲವು ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

`ಅಡಿಲೇಡ್‌ನಲ್ಲಿ ನಡೆದ ಟೆಸ್ಟ್‌ನ ಅಂತಿಮ ದಿನ ಶೇನ್ ವಾರ್ನ್ 25 ಓವರ್‌ಗಳನ್ನು ಬೌಲ್ ಮಾಡಿದ್ದು ಮತ್ತು ಕ್ಯಾಂಡಿಯಲ್ಲಿ ನಡೆದ ಟೆಸ್ಟ್‌ನ ಕೊನೆಯ ದಿನ ಮುತ್ತಯ್ಯ ಮುರಳೀಧರನ್ 25 ಓವರ್‌ಗಳನ್ನು ಬೌಲ್ ಮಾಡಿದ್ದು ನನ್ನ ವೃತ್ತಿಜೀವನದ ಕೆಲವು ಮಹತ್ವದ ಘಟನೆಗಳು~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT