ಇಸ್ಲಾಮಾಬಾದ್ (ಪಿಟಿಐ): ಭಾರತ ಮತ್ತು ಪಾಕಿಸ್ತಾನ ಮಧ್ಯ ಇರುವ ವಾಘಾ-ಅಟ್ಟಾರಿ ಗಡಿ ಸೇರಿದಂತೆ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಉದ್ವೇಗವನ್ನು ಕಡಿಮೆಗೊಳಿಸಿ, ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಬಹು ನಿರೀಕ್ಷಿತವಾಗಿದ್ದ ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಸಭೆ ಮಂಗಳವಾರ ಪ್ರಾರಂಭವಾಯಿತು.
ಸಭೆಯಲ್ಲಿ ಭಾರತೀಯ ಸೇನಾ ನಿಯೋಗದ ಮುಖ್ಯಸ್ಥರಾಗಿ ಲೆಪ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಮತ್ತು ಪಾಕ್ ಸೇನಾ ನಿಯೋಗದ ಮುಖ್ಯಸ್ಥರಾಗಿ ಮೇಜರ್ ಜನರಲ್ ಆಮಿರ್ ರಿಯಾಜ್ ಅವರು ಭಾಗವಹಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡ ಉಭಯ ಸೇನಾ ನಿಯೋಗಗಳು ಓರ್ವ ಬ್ರಿಗೇಡಿಯರ್ ಮತ್ತು ಮೂವರು ಲೆಪ್ಟಿನೆಂಟ್ ಕರ್ನಲ್ಗಳನ್ನು ಒಳಗೊಂಡಿವೆ.
ಇತ್ತೀಚಿನ ದಿನಗಳಲ್ಲಿ ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯಂತಹ ಘಟನೆಗಳು ಜರಗುತ್ತಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಮಹತ್ವ ಬಂದಿದೆ.
ಅಲ್ಲದೇ, ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಸಭೆಯು 14 ವರ್ಷಗಳ ತರುವಾಯ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಈ ಹಿಂದೆ 1999ರಲ್ಲಿ ಕಾರ್ಗಿಲ್ ಯುದ್ಧದ ನಂತರ ನಡೆದಿತ್ತು.