ಕೋಲಾರ: ಭಾರತ ಬಡರಾಷ್ಟ್ರ ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಚಲಿತದಲ್ಲಿರುವ ಮಾತು ಸುಳ್ಳು. ಹಾಗೇನಾದರೂ ಭಾರತ ಬಡರಾಷ್ಟ್ರವಾಗಿದಿದ್ದರೆ ನೂರಾರು ವರ್ಷಗಳ ಹಿಂದೆ ದೇಶವನ್ನು ದೋಚಲು ಬ್ರಿಟೀಷರು ಬರುತ್ತಿದ್ದರೇ? ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ, ಮಾಜಿ ಶಾಸಕ ನಂದೀಶ್ ರೆಡ್ಡಿ ವ್ಯಂಗ್ಯವಾಗಿ ಪ್ರಶ್ನಿಸಿದರು.
ನಗರದ ಹೊರವಲಯದ ಯಾದವ ಸಂಘ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕವು ಏರ್ಪಡಿಸಿದ್ದ ಲೋಕಸಭಾ ಚುನಾವಣೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಬಡರಾಷ್ಟ್ರವಲ್ಲ. ಸಂಪತ್ಭರಿತ ರಾಷ್ಟ್ರ. ಕೆಲವರು ಮಾತ್ರ ಅನೇಕ ಹಗರಣಗಳ ಮೂಲಕ ಭಾರತವನ್ನು ದೋಚಿ, ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಹೊರದೇಶಗಳಲ್ಲಿ ಬಚ್ಚಿಟ್ಟಿದ್ದಾರೆ ಎಂಬುದನ್ನು ಪಕ್ಷದ ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದರು.
ಈ ತನಕ ದೇಶವನ್ನು ಆಳಿದವರು ಭಾರತವನ್ನು ಅಧೋಗತಿಗೆ ತಳ್ಳಿದ್ದಾರೆ. ದೇಶದ ಬೆನ್ನೆಲುಬುಗಳಾದ ರೈತ ಮತ್ತು ಕಾರ್ಮಿಕರ ಕೈ ಬಲಪಡಿಸುವಲ್ಲಿ ವಿಫಲವಾಗಿದ್ದಾರೆ. ಮೂಲ ಸೌಲಭ್ಯಗಳನ್ನು ಕಲ್ಪಿಸಲು ವಿಫಲವಾದ ಜನನಾಯಕರನ್ನು ಲೋಕಸಭೆ ಚುನಾವಣೆಗಳಲ್ಲಿ ಸೋಲಿಸಬೇಕು ಎಂದರು.
ದೇಶದ ಸಮಗ್ರ ಅಭಿವೃದ್ಧಿಯು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತದಿಂದ ಮಾತ್ರ ಸಾಧ್ಯ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಸದಾ ರೈಲು ಬಿಡುವ ಕೋಲಾರದ ಸಾಂಸದ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಪ್ರಪಂಚ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಭಾರತ ದೇಶ ವಿಶ್ವ ಮಟ್ಟದಲ್ಲಿ ಹೆಸರು ಮಾಡಬೇಕಾದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಗುಜರಾತಿನಲ್ಲಿ ಅವರು ಮಾಡಿರುವ ಸಾಧನೆಗಳ ಬಗ್ಗೆ ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ ವಿವರಿಸಬೇಕು ಎಂದರು.
ಮತ್ತೊಬ್ಬ ಜಿಲ್ಲಾ ಉಸ್ತುವಾರಿ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಶಿವಕುಮಾರ್ ಮಾತನಾಡಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾರೆಡ್ಡಿ, ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್.ಆನಂದ್, ಸೀಮೋಲ್, ವೈ.ಸುರೇಂದ್ರ, ಹನುಮಪ್ಪ, ರಾಜ್ಯ ಮುಖಂಡರಾದ ಕೃಷ್ಣಾರೆಡ್ಡಿ, ಸತ್ಯನಾರಾಯಣ ಮಹೇಶ್, ವೆಂಕಟೇಶ ಮೌರ್ಯ, ಶಂಕರನಾರಾಯಣರೆಡ್ಡಿ, ರಂಗಪ್ಪ, ಸತೀಶ್ ರಘುನಾಥ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.