ವಾಷಿಂಗ್ಟನ್ (ಪಿಟಿಐ) : ವಾಲ್ಮಾರ್ಟ್ ಲಾಬಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವ ಭಾರತ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುವ ಚಿಲ್ಲರೆ ದೈತ್ಯ ವಾಲ್ಮಾರ್ಟ್, ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ನೀಡುವುದಾಗಿ ಶುಕ್ರವಾರ ಇಲ್ಲಿ ತಿಳಿಸಿದೆ.
ಪ್ರಕರಣದ ನ್ಯಾಯಾಂಗ ತನಿಖೆಗೆ ಅಮೆರಿಕ ಮೂಲದ ವಾಲ್ಮಾರ್ಟ್ ಸಹಕಾರ ನೀಡುವುದೇ ಎಂಬ ವರದಿಗಾರರ ಪ್ರಶ್ನೆಗೆ `ಭಾರತದ ಅಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ನೀಡಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ' ಎಂದು ವಾಲ್ಮಾರ್ಟ್ ಕಂಪೆನಿ ವಕ್ತಾರರೊಬ್ಬರು ತಿಳಿಸಿದರು.
ಇದೇ ವೇಳೆ ಭಾರತದ ಚಿಲ್ಲರೆ ಮಾರುಕಟ್ಟೆ ಪ್ರವೇಶಿಸಲು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಕಂಪೆನಿ ವಕ್ತಾರರು ಮತ್ತೊಮ್ಮೆ ಸ್ಪಷ್ಟಪಡಿಸಿದರು.