ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆಟಗಾರರ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳ ಟೀಕೆ

Last Updated 29 ಜನವರಿ 2012, 19:30 IST
ಅಕ್ಷರ ಗಾತ್ರ

ಅಡಿಲೇಡ್/ಕರಾಚಿ (ಪಿಟಿಐ): ಕಾಂಗರೂ ಪಡೆ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ರೀತಿಗೆ ಆಸ್ಟ್ರೇಲಿಯಾದ ಮಾಧ್ಯಮಗಳು ಭಾರತದ ಆಟಗಾರರ ವಿರುದ್ಧ ಟೀಕಾ ಪ್ರಹಾರ ಹರಿಸಿವೆ.

`ಭಾರತ ತಂಡಕ್ಕೆ ಕೊನೆಪಕ್ಷ ಪೈಪೋಟಿ ನೀಡಲು ಕೂಡ ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಉದಾಹರಣೆ ಇರಲಿಲ್ಲ. ಪ್ರಮುಖ ಆಟಗಾರರು ನಿವೃತ್ತರಾದ ಮೇಲೆ ಈ ತಂಡ ಬಡವಾಗಿತ್ತು. ಆದರೆ ಈ ದೇಶದ ಬೌಲರ್‌ಗಳು ಪಾರಮ್ಯ ಸಾಧಿಸಿದರು. ನಾಯಕ ಮೈಕಲ್ ಕ್ಲಾರ್ಕ್ ಹಾಗೂ ರಿಕಿ ಪಾಂಟಿಂಗ್ ಫಾರ್ಮ್ ಕಂಡುಕೊಂಡರು~ ಎಂದು ` ಡೈಲಿ ಟೆಲಿಗ್ರಾಫ್~ ತಿಳಿಸಿದೆ.

`ಐದು ದಿನಗಳ ಪಂದ್ಯದ ಫಲಿತಾಂಶ ಮೊದಲ ದಿನವೇ ಗೊತ್ತಾಗುವಂತಿತ್ತು. ಭಾರತ ತಂಡದಲ್ಲಿ ನಾಲ್ಕು ಮಂದಿ ಅನುಭವಿ ಬ್ಯಾಟ್ಸ್‌ಮನ್‌ಗಳ್ದ್ದಿದರು. ಅವರು ಗಳಿಸಿರುವ ರನ್‌ಗಳನ್ನು ಒಟ್ಟು ಮಾಡಿದರೆ 45 ಸಾವಿರಕ್ಕೂ ಅಧಿಕ~ ಎಂದು `ದಿ ಆಸ್ಟ್ರೇಲಿಯನ್~ ಹೇಳಿದೆ.

ಭಾರತದ ಸತತ ವೈಫಲ್ಯ ಇತ್ತ ಪಾಕಿಸ್ತಾನದ ಜನರ ಖುಷಿಗೆ ಕಾರಣವಾಗಿದೆ.  ಪಾಕ್ ಮಾಧ್ಯಮಗಳು ಕೂಡ ಭಾರತದ ಸೋಲಿನ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಿವೆ. ಜೊತೆಗೆ ತಮ್ಮ ದೇಶದವರು ಅಗ್ರ   ರ‌್ಯಾಂಕಿಂಗ್‌ನ ಇಂಗ್ಲೆಂಡ್ ತಂಡವನ್ನು ಟೆಸ್ಟ್ ಸರಣಿಯಲ್ಲಿ ಸದೆಬಡಿದಿರುವುದನ್ನು ಶ್ಲಾಘಿಸಿವೆ.

`ಭಾರತದವರು ಸೋತು, ಪಾಕಿಸ್ತಾನದವರು ಗೆದ್ದರೆ ಅದು ಖಂಡಿತ ನಮ್ಮ ಖುಷಿಗೆ ಕಾರಣವಾಗುತ್ತದೆ. ಇದನ್ನು ನಾವು ಬಹಿರಂಗವಾಗಿ ಹೇಳದೇ ಇರಬಹುದು~ ಎಂದು ಮನಃಶಾಸ್ತ್ರ ತಜ್ಞೆ ಡಾ.ಅಂಬ್ರೀನ್ ನುಡಿದಿದ್ದಾರೆ.

`ಪಾಕಿಸ್ತಾನದ ಆಟಗಾರರನ್ನು ನೋಡಿ ಪಾಠ ಕಲಿಯುವಂತೆ ಭಾರತದ ತಂಡದವರಿಗೆ ಆ ದೇಶದ ಮಾಧ್ಯಮಗಳೇ ಕಿವಿಮಾತು ಹೇಳುತ್ತಿವೆ~ ಎಂಬುದು ಕೂಡ ಖುಷಿ ನೀಡುವ ವಿಷಯ ಎಂದು ಅವರು ತಿಳಿಸಿದ್ದಾರೆ.

`ಭಾರತದವರು ನಮ್ಮ ಆಟಗಾರರನ್ನು ತಿರಸ್ಕರಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡುತ್ತಿಲ್ಲ. ಈಗ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗ ಅವರ ಬೇಡಿಕೆ ಹೆಚ್ಚಾಗ   ಬಹುದು~ ಎಂದು ಮಾಜಿ ನಾಯಕ ಮೊಯಿನ್ ಖಾನ್ ಹೇಳಿದ್ದಾರೆ. 

 ರ‌್ಯಾಂಕಿಂಗ್‌ನಲ್ಲಿ ಕುಸಿತ: ಸಚಿನ್ ತೆಂಡೂಲ್ಕರ್ ಸೇರಿದಂತೆ ಭಾರತ ತಂಡದ ಪ್ರಮುಖ ಆಟಗಾರರು ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ.  9ನೇ ಸ್ಥಾನದಲ್ಲಿದ್ದ ಸಚಿನ್ 13ನೇ ಸ್ಥಾನಕ್ಕಿಳಿದಿದ್ದಾರೆ. ರಾಹುಲ್ ದ್ರಾವಿಡ್ (18ನೇ ಸ್ಥಾನ), ವಿ.ವಿ.ಎಸ್.ಲಕ್ಷ್ಮಣ್ (23ನೇ ಸ್ಥಾನ),  ಗೌತಮ್ ಗಂಭೀರ್ (34ನೇ ಸ್ಥಾನ) ಕೂಡ ಕುಸಿತ ಕಂಡಿದ್ದಾರೆ.

ಆತಂಕ ಬೇಡ (ಜಲಂಧರ್ ವರದಿ) `ಭಾರತ ಸರಣಿ ಸೋತಿರುವುದಕ್ಕೆ ಆತಂಕಪಡುವುದು ಬೇಡ. ಯಾವುದೇ ತಂಡಕ್ಕೆ ಈ ರೀತಿ ಕಷ್ಟ ಕಾಲ ಎದುರಾಗಬಹುದು. ನಾವು ವಿಶ್ವ ಚಾಂಪಿಯನ್ನರು. ಪುಟಿದೇಳುವ ಸಾಮರ್ಥ್ಯವಿದೆ~ ಎಂದು ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ನುಡಿದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT