ಬೆಂಗಳೂರು: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ವಿಚಾರದಲ್ಲಿ ಅಮೆರಿಕ ನಡೆದುಕೊಂಡ ರೀತಿ ಹಾಗೂ ನನ್ನೊಂದಿಗೆ ಸ್ಥಳೀಯ ಪೊಲೀಸರು ನಡೆದುಕೊಂಡ ರೀತಿ ಎರಡೂ ಒಂದೇ. ಬೇರೆ ದೇಶಗಳಲ್ಲಿ ತನ್ನ ರಾಜತಾಂತ್ರಿಕ ಅಧಿಕಾರಿಗಳಿಗೆ ಅನ್ಯಾಯವಾದಾಗ ಪ್ರತಿಭಟಿಸುವ ಭಾರತ, ತನ್ನ ನೆಲದಲ್ಲೇ ಆದ ಅನ್ಯಾಯಗಳ ಬಗ್ಗೆ ಮೌನವಹಿಸುವುದೇಕೆ’ ಎಂದು ಫ್ರೆಂಚ್ ಕಾನ್ಸುಲ್ ಕಚೇರಿಯ ಮಾಜಿ ಕಿರಿಯ ಅಧಿಕಾರಿ ಪಾಸ್ಕಲ್ ಮಜುರಿಯರ್ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಮಗಳ ಮೇಲೆ ಅತ್ಯಾಚಾರ ಎಸಗಿರುವುದು ಸುಳ್ಳು. ಇದಕ್ಕೆ ಡಿಎನ್ಎ ಪರೀಕ್ಷೆಯ ವರದಿಯೇ ಸಾಕ್ಷಿ. ಆದರೂ ನಾನು ನಿರಪರಾಧಿ ಎಂದು ತೀರ್ಪು ನೀಡುವಲ್ಲಿ ವಿಳಂಬವಾಗುತ್ತಿದೆ’ ಎಂದು ಆರೋಪಿಸಿದರು.
‘ರಾಜತಾಂತ್ರಿಕ ವಿಷಯಗಳಲ್ಲಿ ತ್ವರಿತವಾಗಿ ನ್ಯಾಯದಾನವಾಗಬೇಕು ಎಂದು ಹೇಳುತ್ತಿರುವ ಭಾರತದೊಳಗೇ ನ್ಯಾಯದಾನ ವಿಳಂಬವಾಗುತ್ತಿದೆ. ತನಗೊಂದು ನ್ಯಾಯ ಇತರರಿಗೆ ಒಂದು ನ್ಯಾಯ ಎಂಬ ಭಾರತದ ಈ ಇಬ್ಬಂದಿತನ ಸರಿಯಲ್ಲ’ ಎಂದು ದೂರಿದರು.
‘ದೇವಯಾನಿ ಖೋಬ್ರಾಗಡೆ ಅವರನ್ನು ಅಮೆರಿಕ ಪೊಲೀ-ಸರು ನಡೆಸಿಕೊಂಡ ರೀತಿಯಲ್ಲೇ ಸ್ಥಳೀಯ ಪೊಲೀಸರು ನನ್ನನ್ನು ನಡೆಸಿಕೊಂಡಿದ್ದಾರೆ. ನನ್ನನ್ನು ಬಂಧಿಸಿ ಅಮಾನವೀಯವಾಗಿ ಎಳೆದೊಯ್ದು ಮದ್ಯವ್ಯಸನಿಗಳಿದ್ದ ಸೆಲ್ನಲ್ಲಿ ಇಟ್ಟಿದ್ದರು. ಸೆಲ್ನಲ್ಲಿ ಬರಿಯ ನೆಲದ ಮೇಲೆ ಮಲಗುವ ಪರಿಸ್ಥಿತಿ ಇತ್ತು. ನಾನೊಬ್ಬ ರಾಜತಾಂತ್ರಿಕ ಅಧಿಕಾರಿ ಎಂಬುದು ತಿಳಿದಿದ್ದೂ ಈ ರೀತಿ ವರ್ತಿಸಿದರು’ ಎಂದರು.
ಒಂದು ಬಾರಿಯೂ..
ಮೊಮ್ಮಕ್ಕಳನ್ನು ನೋಡಬೇಕೆಂದು ಮೂರು ಬಾರಿ ಫ್ರಾನ್ಸ್ನಿಂದ ಬೆಂಗಳೂರಿಗೆ ಬಂದೆ. ಆದರೆ, ಒಂದು ಬಾರಿಯೂ ಮಕ್ಕಳನ್ನು ನೋಡಲು ಸುಜಾ ಜೋನ್ಸ್ ಅವಕಾಶ ನೀಡಲಿಲ್ಲ. ಈ ಬಾರಿ ಕ್ರಿಸ್ಮಸ್ ಉಡುಗೊರೆ ನೀಡಲು ನಗರಕ್ಕೆ ಬಂದಿದ್ದೇನೆ. ಆದರೆ, ಆಕೆ ಈ ಬಾರಿಯೂ ಅವಕಾಶ ಕೊಡುತ್ತಿಲ್ಲ.
–ಜಾಕಿ, ಪಾಸ್ಕಲ್ ತಾಯಿ