ಸೇಂಟ್ ಜಾನ್ಸ್, ಆ್ಯಂಟಿಗಾ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮನವಿಗೆ ಸ್ಪಂದಿಸಿರುವ ವೆಸ್ಟ್ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯುಐಸಿಬಿ) ಭಾರತದಲ್ಲಿ ಟೆಸ್ಟ್ ಸರಣಿ ಆಡಲು ಒಪ್ಪಿಗೆ ನೀಡಿದೆ.
ಸಚಿನ್ ತೆಂಡೂಲ್ಕರ್ ಅವರಿಗೆ ಸ್ವದೇಶದಲ್ಲಿ 200ನೇ ಟೆಸ್ಟ್ ಪಂದ್ಯ ಆಡಲು ಅನುವು ಮಾಡಿಕೊಡುವ ಉದ್ದೇಶದಿಂದ ಬಿಸಿಸಿಐ ಈ ಯೋಜನೆಗೆ ಮುಂದಾಗಿತ್ತು. ಈ ಮೊದಲು ನಿಗದಿಯಾದಂತೆ ಸಚಿನ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 200ನೇ ಟೆಸ್ಟ್ ಪಂದ್ಯ ಆಡಬೇಕಿತ್ತು.
ಆದರೆ ವಿಂಡೀಸ್ ಈಗ ಒಪ್ಪಿರುವುದರಿಂದ ತಮ್ಮ ದೇಶದ ಪ್ರೇಕ್ಷಕರ ಎದುರು ಈ ಸಾಧನೆ ಮಾಡಲು ತೆಂಡೂಲ್ಕರ್ಗೆ ಅವಕಾಶ ಲಭಿಸಿದೆ. ಚಾಂಪಿಯನ್ ಬ್ಯಾಟ್ಸ್ಮನ್ ವಿದಾಯ ಹೇಳಲು ವೇದಿಕೆ ಎಂದೇ ಈ ಸರಣಿಯನ್ನು ಬಿಂಬಿಸಲಾಗಿದೆ. ಸಚಿನ್ ಈಗಾಗಲೇ 198 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ.
‘ನವೆಂಬರ್ನಲ್ಲಿ ಭಾರತದಲ್ಲಿ ಸರಣಿ ಆಡಲು ನೀಡಿರುವ ಆಹ್ವಾನವನ್ನು ನಾವು ಒಪ್ಪಿದ್ದೇವೆ. ಈ ಪ್ರವಾಸದ ವೇಳೆ ನಾವು ಎರಡು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದ್ದೇವೆ’ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮುಂಬೈ ವರದಿ: ಈ ನಡುವೆ, ವಾಂಖೇಡೆ ಕ್ರೀಡಾಂಗಣದಲ್ಲಿ ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಆಯೋಜಿಸಲು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಬಯಸಿದೆ. ಅದು ಸಚಿನ್ ಪಾಲಿಗೆ 200ನೇ ಟೆಸ್ಟ್ ಪಂದ್ಯ ಎಂಬುದು ಎಂಸಿಎ ಉದ್ದೇಶ. ಈ ಸಂಬಂಧ ಬಿಸಿಸಿಐಗೆ ಮನವಿ ಸಲ್ಲಿಸಲಾಗುವುದು ಎಂದು ಎಂಸಿಎ ಜಂಟಿ ಕಾರ್ಯದರ್ಶಿ ನಿತಿನ್ ದಲಾಲ್ ತಿಳಿಸಿದ್ದಾರೆ.