ಕಠ್ಮಂಡು (ಐಎಎನ್ಎಸ್): ನೇಪಾಳಕ್ಕೆ ಹಾಲಿನ ಪುಡಿ ಹಾಗೂ ಹಾಲಿನ ಇತರ ಉತ್ಪನ್ನಗಳ ರಫ್ತನ್ನು ಭಾರತ ನಿಷೇಧಿಸಿರುವುದರಿಂದ ಇಲ್ಲಿನ ಪಶುಪತಿನಾಥ ದೇವಾಲಯದಲ್ಲಿ ಉತ್ಸವದ ಆಚರಣೆಗೆ ಭಕ್ತರು ಪರದಾಡುವಂತಾಗಿದೆ.
ಮಾರ್ಚ್ 2ರಂದು ಮಹಾಶಿವರಾತ್ರಿ ನಿಮಿತ್ತ ಪಶುಪತಿನಾಥನಿಗೆ ಹಾಲಿನ ಅಭೀಷೇಕ, ಹಾಲಿನ ನೈವೇದ್ಯ, ಪ್ರಸಾದಕ್ಕಾಗಿ ತಿನಿಸುಗಳ ತಯಾರಿಕೆಗೆ ಹಾಲು ಅತ್ಯಗತ್ಯ. ಆದರೆ ಇಲ್ಲಿ ಹಾಲಿನ ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಹಾಲು ಮತ್ತು ಹಾಲು ಉತ್ಪನ್ನಗಳ ರಫ್ತಿಗೆ ಭಾರತ ನಿಷೇಧ ಹೇರಿರುವ ಕ್ರಮಕ್ಕೆ ನೇಪಾಳದ ಡೇರಿ ಪ್ರಾಧಿಕಾರ ಅತೃಪ್ತಿ ವ್ಯಕ್ತಪಡಿಸಿದೆ.
ಹಾಲಿನ ಪುಡಿ, ಕೆನೆಹಾಲಿನ ಪುಡಿ, ಡೇರಿ ವೈಟ್ನರ್, ಪುಟಾಣಿ ಖಾದ್ಯಗಳ ರವಾನೆಯನ್ನು ಭಾರತ ನಿಷೇಧಿಸಿದೆ. ಸ್ಥಳೀಯವಾಗಿ ಹಾಲು- ಉತ್ಪನ್ನಗಳ ಬೇಡಿಕೆ ಹೆಚ್ಚಿರುವುದು, ಬೆಲೆ ಏರಿಕೆಯ ಕಾರಣಗಳನ್ನು ಭಾರತ ರಫ್ತು ನಿಷೇಧಕ್ಕೆ ನೀಡಿದೆ.
ಚಳಿ ಹಾಗೂ ಬೇಸಿಗೆಯ ಶುಷ್ಕ ಹಂಗಾಮಿನಲ್ಲಿ ನೇಪಾಳದಲ್ಲಿ ಹಾಲು ಉತ್ಪಾದನೆ ತೀವ್ರ ಕುಸಿಯುತ್ತದೆ. ಈ ಅವಧಿಯಲ್ಲಿ ಇದುವರೆಗೆ ಭಾರತ ಇವರ ಬೇಡಿಕೆಗೆ ಸ್ಪಂದಿಸುತ್ತಿತ್ತು. ವಾರ್ಷಿಕವಾಗಿ ಸುಮಾರು 5000 ಟನ್ಗಳಷ್ಟು ಹಾಲುಪುಡಿಯನ್ನು ನೇಪಾಳ ಆಮದು ಮಾಡಿಕೊಳ್ಳುತ್ತಿದೆ.